ಕಲಘಟಗಿ: ರೈತರ ಪಂಪಸೆಟ್ಗಳಿಗೆ 24 ಘಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಹೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ಮಾಡಿದರು. ಹೆಸ್ಕಾಂ ಅಧಿಕಾರಿಗಳನ್ನು ಇಲಾಖೆ ಕಚೇರಿ ಒಳಗೆ ಕೂಡಿ ಹಾಕಿ, ವಿದ್ಯುತ್ ಪೂರೈಕೆ ಮಾಡುವವರೆಗೆ ಹೊರಗೆ ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಕಲಘಟಗಿ ಪಟ್ಟಣದ ಸುತ್ತ ಮುತ್ತಲ ರೈತರಿಗೆ ಹಲವು ತಿಂಗಳುಗಳಿಂದ 24 ಘಂಟೆ ವಿದ್ಯುತ್ ಪೂರೈಕೆ ಮಾಡಲಾ ಗಿತ್ತು. ಆದರೆ ಈಗ ಮಳೆ ಹೋಗಿದ್ದು, ವಿದ್ಯುತ್ ಪೂರೈಕೆಯನ್ನು ಸಹ ಸ್ಥಗಿತಗೊಳಿಸಲಾಗುತ್ತಿದೆ ಎಂದು ದೂರಿದರು.
‘ಗೋವಿನ ಜೋಳ, ಸೋಯಾಬೀನ್ ಬೆಳೆಗಳು ಅತಿವೃಷ್ಟಿ ಮಳೆಯಿಂದ ನೆಲ ಕಚ್ಚಿ ಹಾಳಾಗಿವೆ. ಬೇಸಿಗೆಯ ಹಿಂಗಾರು ಬೆಳೆಗಳಿಗೆ 7 ಗಂಟೆ ವಿದ್ಯುತ್ ಸಾಲುತ್ತಿಲ್ಲ. 24 ಗಂಟೆ ವಿದ್ಯುತ್ ಒದಗಿಸಿದರೆ ನಾವು ಬೆಳೆ ಬೆಳೆಯುತ್ತೇವೆ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಬಸವರಾಜ ಹೊನ್ನಳ್ಳಿ, ಶಂಬು ಬಳಿಗೇರ, ಕಲ್ಮೇಶ ಬೆಣ್ಣಿ, ಬಸವರಾಜ ಹಟಿಗ್ಯಾರ, ಮಂಜುನಾಥ ಸಾಬಣ್ಣವರ, ಅರ್ಜುನ ನೆಸ್ರೇಕರ, ವಿಜಯ ಬೆಣ್ಣಿ, ಮಂಜುನಾಥ ವಾಲಿಕಾರ ಇದ್ದರು.