ಅಳ್ನಾವರ: ಮಿಂಚಿನ ಪ್ರದರ್ಶನ ತೋರಿದ ಕುಮಟಾದ ಶಾಂತಿಕಾಂಬಾ ತಂಡವು ಇಲ್ಲಿ ಅಳ್ನಾವರ ವಾರಿಯರ್ಸ್ ಕ್ರೀಡಾ ಪ್ರೇಮಿಗಳು ಹಮ್ಮಿಕೊಂಡ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಅನಾಯಾಸವಾಗಿ ಪ್ರಶಸ್ತಿ ಗೆದ್ದಿತು.
ಗ್ರಾಮದೇವಿ ಜಾತ್ರಾ ಸ್ಥಳದಲ್ಲಿ ನಡೆದ ಈ ಟೂರ್ನಿಯನ್ನು ಮಾಜಿ ಸಚಿವ ಸಂತೋಷ್ ಲಾಡ್ ಪ್ರಾಯೋಜಿಸಿದ್ದರು. ಟೂರ್ನಿ ಫೈನಲ್ ಪಂದ್ಯದಲ್ಲಿ ಕುಮಟಾ ತಂಡವು ಎರಡು ನೇರ ಸೆಟ್ಗಳಿಂದ ಧಾರವಾಡದ ಸಾಯಿ ತಂಡವನ್ನು ಸುಲಭವಾಗಿ ಮಣಿಸಿತು. ಉತ್ತಮ ಆಟವಾಡಿದ ದಾಂಡೇಲಿ ತಂಡ ತೃತೀಯ ಸ್ಥಾನಗಳಿಸಿತು.
ಕುಮಟಾ ತಂಡದ ನವೀನ್ ಅವರಿಗೆ ಉತ್ತಮ ಹೊಡೆತಗಾರ, ಚಿನ್ನ ಅವರಿಗೆ ಉತ್ತಮ ಎಸೆತಗಾರ ಹಾಗೂ ಧಾರವಾಡದ ಸಾಯಿ ತಂಡದ ವಿಕಾಸ ಅವರಿಗೆ ‘ಬೆಸ್ಟ್ ಆಲ್ರೌಂಡರ್’ ಬಹುಮಾನ ನೀಡಲಾಯಿತು.
ಸುಂದರ ಸಂಜೆಯಲ್ಲಿ ಟೂರ್ನಿ ಉದ್ಘಾಟಿಸಿ ಮಾತನಾಡಿದ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ‘ಸಂತೋಷ್ ಲಾಡ್ ಅವರು ಕ್ರೀಡೆಗಳಿಗೆ ಸದಾ ಉತ್ತೇಜನ ನೀಡುತ್ತ ಬಂದಿದ್ದಾರೆ. ಕ್ರೀಡಾಪಟುಗಳನ್ನು ಬೆಳೆಸಬೇಕು, ಅವರನ್ನು ಪ್ರೋತ್ಸಾಹಿಸಬೇಕು ಎಂಬುದು ಅವರ ಹಂಬಲ’ ಎಂದರು.
‘ಪ್ರಸ್ತುತ ಒತ್ತಡದ ಜೀವನ ಶೈಲಿಯಿಂದ ಹೊರಬರಲು ಕ್ರೀಡೆಯಲ್ಲಿ ತೊಡಗಬೇಕು. ಈ ಮೂಲಕ ಆರೋಗ್ಯಯುತ ಸಮಾಜ ಕಟ್ಟಬೇಕು’ ಎಂದರು.
ನಿರ್ಣಾಯಕರಾಗಿ ಪುಂಡಲಿಕ ಪಾರ್ದಿ, ಸುನಿಲ್ ಸಾಗರೇಕರ, ಮಹಾಂತೇಶ ಬೆಳಗಾವಿ, ಆನಂದ ಪಾಟೀಲ, ಮಂಜುನಾಥ ಪಾಟೀಲ, ಸೌದಾಗರ ಕಾರ್ಯನಿರ್ವಹಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಕಡಕೋಳ ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡಿದರೆ, ದೈಹಿಕ ಶಿಕ್ಷಣ ಶಿಕ್ಷಕರು ನೆಟ್ ವ್ಯವಸ್ಥೆ ಮಾಡಿದ್ದರು.