ನವಲಗುಂದ: ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಮೂಲಸೌಲಭ್ಯಗಳಿಂದ ವಂಚಿತಗೊಂಡಿದ್ದು, ಪ್ರಯಾಣಿಕರು ನಿತ್ಯ ಪರದಾಡುವಂತೆ ಆಗಿದೆ.
ಹುಬ್ಬಳ್ಳಿ–ವಿಜಯಪುರ ಹೆದ್ದಾರಿ ಮೇಲೆ ಇರುವ ಈ ಬಸ್ ನಿಲ್ದಾಣ ಅತ್ಯಂತ ಜನದಟ್ಟಣೆಯಿಂದ ಕೂಡಿರುತ್ತದೆ. ನೂರಾರು ವಾಹನಗಳು ಸಂಚರಿಸುತ್ತಿದ್ದು, ಬಸ್ ನಿಲ್ದಾಣದ ಎದುರು ಎಲ್ಲೆಂದರಲ್ಲಿ ನಿಲ್ಲುವ ವಾಹನಗಳಿಂದ ಸಂಚಾರ ವ್ಯವಸ್ಥೆ ವ್ಯವಸ್ಥೆಯಿಂದ ಕೂಡಿರುತ್ತದೆ.
ಅಲ್ಲದೇ ಬಸ್ ನಿಲ್ದಾಣದ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳ ಕೂಡಾ ಚಿಕ್ಕದಾಗಿದ್ದು, ನೂರಾರು ವಾಹನಗಳು ನಿಲ್ಲುತ್ತವೆ. ಶೌಚಾಲಯಗಳು ಕೂಡಾ ಗಬ್ಬೆದ್ದು ನಾರುತ್ತಿದ್ದು, ಕುಳಿತುಕೊಳ್ಳಲು ಆಸನಗಳು ಕೂಡಾ ಅವ್ಯವಸ್ಥೆಯಿಂದ ಕೂಡಿವೆ. ನಿತ್ಯ ಅಂಗಡಿಕಾರರು, ಪ್ರಯಾಣಿಕರು ತಿಂದು ಬಿಸಾಡುವ ಪ್ಲಾಸ್ಟಿಕ್ ಕವರ್, ಕಾಗದ ಸೇರಿದಂತೆ ತಾಜ್ಯಗಳಿಂದ ಗಲೀಜಿನ ವಾತಾವರಣ ನಿರ್ಮಾಣವಾಗಿರುತ್ತದೆ.
ವೃದ್ಧರು, ಮಹಿಳೆಯರು, ಮಕ್ಕಳು ಇದರಿಂದ ತೊಂದರೆ ಅನುಭವಿಸುವಂತೆ ಆಗಿದೆ. ಬಿಡಾಡಿ ದನಗಳು, ಹಂದಿ, ನಾಯಿಗಳು ಕೂಡಾ ಬಸ್ ನಿಲ್ದಾಣದಲ್ಲಿ ನುಗ್ಗಿ ಮತ್ತಷ್ಟ ಅಸಹನೀಯ ವಾತಾವರಣ ನಿರ್ಮಾಣ ಮಾಡಿವೆ.
ಜವಾಬ್ದಾರಿ ಮರೆತ ಪ್ರಯಾಣಿಕರು: ಬಸ್ ನಿಲ್ದಾಣ ಸುತ್ತ ಮುತ್ತ ಎಲ್ಲೆಂದರಲ್ಲಿ ಕಸ, ಮಲ-ಮೂತ್ರ ವಿಸರ್ಜನೆ, ಗುಟ್ಕಾ, ಎಲೆ ಅಡಿಕೆ ಉಗುಳುವುದು ಸೇರಿದಂತೆ ಮಾಡುತ್ತಾರೆ. ನಾಗರಿಕ ಜವಾಬ್ದಾರಿಯನ್ನು ನಾಗರಿಕರು ಮರೆಯುತ್ತಿದ್ದು, ಸ್ವಚ್ಛತಾ ಸಿಬ್ಬಂದಿಗೆ ತಲೆ ನೋವಾಗಿದೆ.
ಸಾರಿಗೆ ಇಲಾಖೆ ನಿರ್ಲಕ್ಷ್ಯ: ಬಸ್ ನಿಲ್ದಾಣ ನಿಯಂತ್ರಣಾಧಿಕಾರಿಗಳು, ವ್ಯವಸ್ಥಾಪಕರು ಬಸ್ ನಿಲ್ದಾಣದ ಆವರಣ ನಿತ್ಯ ಸ್ವಚ್ಛಗೊಳಿಸುವ ಕೆಲಸದತ್ತ ಗಮನ ಹರಿಸಬೇಕು. ಗಲೀಜು ಮಾಡುವ ಎಲ್ಲ ಜನರಿಗೂ ಹೇಳಲು ಆಗುವುದಿಲ್ಲ. ಸಂಬಂಧಿಸಿದ ಸ್ವಚ್ಛತಾ ಸಿಬ್ಬಂದಿಯಿಂದ ಕೆಲಸ ಮಾಡಬೇಕು ಎಂದು ಹಿರಿಯರೊಬ್ಬರು ಹೇಳಿದರು.
ಗಟ್ಟಿಕೊಂಡ ಚರಂಡಿ: ಗಲೀಜು ನೀರು ಆವರಣದೊಳಗೆ ಎಲ್ಲೆಂದರಲ್ಲಿ ಕಸ, ಅಂಗಡಿಕಾರರ ತ್ಯಾಜ್ಯ ನಿತ್ಯ ದಟ್ಟಣೆಯಿಂದ ಕೂಡಿರುವ ಬಸ್ ನಿಲ್ದಾಣ
ನವಲಗುಂದ ಪವಾಡ ಪುರುಷರ ನಾಡು. ಸ್ವಚ್ಛತೆ ಬಗ್ಗೆ ಕನಿಷ್ಠ ಸಂಬಂಧಿಸಿದವರು ಕಾಳಜಿ ವಹಿಸಬೇಕು. ಅಲ್ಲದೇ ಸರ್ಕಾರ ಈ ನಿಲ್ದಾಣಕ್ಕೆ ಅಜಾತ ನಾಗಲಿಂಗಸ್ವಾಮಿ ಬಸ್ ನಿಲ್ದಾಣ ಎಂದು ಹೆಸರಿಡಬೇಕುನಿಂಗಪ್ಪ ಬಾರಕೇರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ
ನಗರದಲ್ಲಿರುವ ಬಸ್ ನಿಲ್ದಾಣದ ಇಂದಿನ ಸ್ಥಿತಿ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದ್ದು ಈ ಬಗ್ಗೆ ಪರಿಶೀಲಿಸಲಾಗಿದೆ. ಕೂಡಲೇ ನಿಲ್ದಾಣದಲ್ಲಿರುವ ನ್ಯೂನತೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದುಬಸವರಾಜ್ ಮುಳ್ಳೂರ ಘಟಕ ವ್ಯವಸ್ಥಾಪಕರು ನವಲಗುಂದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.