ಕಲಘಟಗಿ: ಅನಾರೋಗ್ಯದಿಂದ ನಿಧನ ಹೊಂದಿದ ತಾಲ್ಲೂಕಿನ ಬೇಗೂರ ಗ್ರಾಮದ ಯೋಧ ಮಹದೇವಪ್ಪ ಷಣ್ಮುಖಪ್ಪ ಮುತ್ತಗಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಯಿತು.
ಪಾರ್ಥಿವ ಶರೀರರವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಪೂಜೆ ಸಲ್ಲಿಸಲಾಯಿತು. ಶಾಸಕ ಸಿ. ಎಂ ನಿಂಬಣ್ಣವರ, ಕೆಪಿಸಿಸಿ ಉಪಾಧ್ಯಕ್ಷ ಸಂತೋಷ್ ಲಾಡ್ ಹಾಗೂ ನೂರಾರು ಜನ ಯೋಧನ ಅಂತಿಮ ದರ್ಶನ ಪಡೆದರು.
ಜೈ ಹಿಂದ್, ಭಾರತ್ ಮಾತಾಕಿ ಜೈ ಘೋಷಣೆ ಮೊಳಗಿದವು. ನಂತರ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಗ್ರಾಮದ ಜನರು ನಮಿಸಿ ಅಂತಿಮ ಗೌರವ ಸಲ್ಲಿಸಿದರು.
ಕುಟುಂಬದವರು ಸಂಪ್ರದಾಯದ ಪ್ರಕಾರ ಪೂಜೆ ಸಲ್ಲಿಸಿದರು. ಸೇನಾ ಕಮಾಂಡರ್ಗಳು ಕುಟುಂಬ ದವರಿಗೆ ರಾಷ್ಟ್ರಧ್ವಜ ಹಸ್ತಾಂತರ ಮಾಡಿ ಯೋಧನಿಗೆ ಗೌರವ ಸಲ್ಲಿಸಿದರು. ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು, ಕುಟುಂಬ ದವರ ಆಕ್ರಂದನ ಮುಗಿಲು ಮುಟ್ಟಿತ್ತು.