ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಮಹಿಳಾ ಜಗದ್ಗುರು ಶ್ರೇಯ

ಪಟ್ಟಭದ್ರರ ವಿರೋಧದ ನಡುವೆ ಅಕ್ಕಮಹಾದೇವಿ ಪೀಠ ಸ್ಥಾಪನೆ
Last Updated 14 ಮಾರ್ಚ್ 2019, 12:41 IST
ಅಕ್ಷರ ಗಾತ್ರ

ಕೂಡಲಸಂಗಮ: ಹಣೆಯ ಮೇಲೆ ಭಸ್ಮ, ಕೊರಳಲ್ಲಿ, ಕೈಗಳಲ್ಲಿ ರುದ್ರಾಕ್ಷಿ ಮಾಲೆ, ಹೂಗಳಿಂದ ಕಟ್ಟಿದ ಮುಡಿ, ಕಂಚಿನ ಕಂಠದ ನಿರರ್ಗಳ ಪ್ರವಚನ ಶೈಲಿ ಹೀಗೆ ಹಲವು ವಿಶೇಷಗಳ ಮೂಲಕ ನಾಡಿನಾದ್ಯಂತ ಮಾತಾಜಿ ಎಂಬ ಹೆಸರಿನಿಂದ ಪರಿಚಿತರಾಗಿದ್ದ ಮಾತೆ ಮಹಾದೇವಿ,ಶರಣ ಪರಂಪರೆಯ ಪ್ರಥಮ ಮಹಿಳಾ ಜಗದ್ಗುರು.

ಪ್ರವಚನ, ಶರಣ ಸಂಸ್ಕೃತಿ–ಸಾಹಿತ್ಯದ ಸಂಶೋಧನೆಯ ಮೂಲಕ ಬಸವತತ್ವವನ್ನು ಭಾರತ ಮಾತ್ರವಲ್ಲದೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪಸರಿಸಿ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ದೆಹಲಿ ರಾಜ್ಯದಲ್ಲಿ ಬಸವ ಮಂಟಪ, ಆಶ್ರಮಗಳನ್ನು ಸ್ಥಾಪಿಸಿದ ಶ್ರೇಯಸ್ಸು ಮಾತಾಜಿಗೆ ಸಲ್ಲುತ್ತದೆ.

‘ಸನ್ಯಾಸಿ ಆಗುವುದು ಪುರುಷರು ಮಾತ್ರ. ಸ್ತ್ರೀಗೆ ಕಾವಿ, ಸನ್ಯಾಸ ಸಲ್ಲದು’ ಎಂಬ ಭಾವ ಬೇರೂರಿದ್ದ ಸಂದರ್ಭದಲ್ಲಿ ಸಂಪ್ರದಾಯಕ್ಕೆ ಸಡ್ಡು ಹೊಡೆದು, ಪಟ್ಟಭದ್ರರ ವಿರೋಧದ ನಡುವೆ ಲಿಂಗಾನಂದ ಸ್ವಾಮೀಜಿ,ಧಾರವಾಡದಲ್ಲಿ 1970ರ ಏ. 27ರಂದು ಅಕ್ಕಮಹಾದೇವಿ ಮಹಿಳಾ ಜಗದ್ಗುರು ಪೀಠ ಸ್ಥಾಪಿಸಿ ಅದರ ಪ್ರಥಮ ಪೀಠಾಧಿಪತಿ ಆಗಿ ಮಾತೆ ಮಹಾದೇವಿ ಅವರನ್ನು ನೇಮಕ ಮಾಡಿದರು. ಈ ವೇಳೆ ಎದುರಾದ ಹಲವು ತೊಂದರೆಗಳನ್ನು ದಿಟ್ಟತನದಿಂದ ಎದುರಿಸಿದರು. ಅನಂತರದ್ದು ದೊಡ್ಡ ಪರಿವರ್ತನೆ. ಇಂದು ದೇಶದಲ್ಲಿ ಮಹಿಳಾ ಸನ್ಯಾಸಿ ಮಠಾಧಿಪತಿಗಳ ಪರಂಪರೆಯೇ ಆರಂಭವಾಗಿದೆ.

ಜಾತಿ ಜಂಗಮರು ಮಾತ್ರ ಲಿಂಗಾಯತ ಮಠಗಳ ಹಕ್ಕು ಸ್ಥಾಪಿಸಿಕೊಂಡಿರುವಾಗ ಬಣಜಿಗ, ಪಂಚಮಸಾಲಿ, ನೊಳಂಬ, ಗಾಣಿಗ, ಸಾದರು ಸೇರಿ ಎಲ್ಲ ಲಿಂಗಾಯತ ಒಳಪಂಗಡದವರಿಗೂ, ಬ್ರಾಹ್ಮಣ, ದಲಿತ, ವೈಶ್ಯ, ಮುಸ್ಲಿಂ ಹೀಗೆ ಬಸವತತ್ವ ಅನುಸರಿಸುವ ಎಲ್ಲ ಜಾತಿ, ಜನಾಂಗದವರಿಗೂ ಜಂಗಮದೀಕ್ಷೆ ಹಾಗೂ ಲಿಂಗದೀಕ್ಷೆಯನ್ನು ನೀಡಿ ಅವರು ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದರು.

ಬಸವತತ್ವದ (ಲಿಂಗಾಯತ ತತ್ವ) ವೈಚಾರಿಕ, ವೈಜ್ಞಾನಿಕ, ಪ್ರಗತಿಪರ ನಿಲುವುಗಳನ್ನು ಸಮಾಜದಲ್ಲಿ ಪ್ರಚಾರ ಮಾಡಿ ಬಸವತತ್ವ ಎಲ್ಲೆಡೆ ಮನ್ನಣೆ ಪಡೆಯುವಂತೆ ಮಾಡಿದರು. ಲಿಂಗಾಯತ ಒಳಪಂಗಡಗಳಲ್ಲಿ ಪರಸ್ಪರ ವಿವಾಹ ಸಂಬಂಧಗಳನ್ನು ಮಾಡಿಸಿ ಲಿಂಗಾಯತ ಐಕ್ಯತೆ ಮೆರೆದರು.

ಬಸವತತ್ವ, ಲಿಂಗಾಯತ ಧರ್ಮಕ್ಕೆ ಚ್ಯುತಿ ಬಂದಾಗ ಪ್ರತಿಭಟನೆಯ ಮಾರ್ಗ ತುಳಿದರು. ಧರ್ಮದ ರಕ್ಷಣೆ, ಸಮಾಜದ ಘನತೆ ಉಳಿಯುವಂತೆ ನೋಡಿಕೊಂಡರು. ಇದರಿಂದ ಹಲವು ನಿಂದೆಗಳನ್ನೂ ಅವರು ಎದುರಿಸಬೇಕಾಯಿತು.

ಶರಣ ತತ್ವ ಪ್ರಸಾರ:

ಬಸವಣ್ಣ ಹಾಗೂ ಸಮಕಾಲೀನ ಶರಣರ ತತ್ವಗಳನ್ನು ಜಗತ್ತಿಗೆ ಬಿತ್ತರಿಸಬೇಕು ಎಂಬ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮವನ್ನು ಲಿಂಗಾಯತರ ಧರ್ಮಕ್ಷೇತ್ರ ಎಂದು ಸಾರಿ 1948 ಜ. 14ರಿಂದ 16ರವರೆಗೆ ಪ್ರಥಮ ಶರಣ ಮೇಳ ನಡೆಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು. ಅಂದು ಆರಂಭವಾದ ಶರಣ ಮೇಳ ಇಂದಿಗೂ ಪ್ರತಿ ವರ್ಷ ಜ. 11ರಿಂದ 14ರವರೆಗೆ ನಡೆದುಕೊಂಡು ಬಂದಿದೆ. 32 ವರ್ಷಗಳ ಕಾಲ ನಿರಂತರವಾಗಿ ಅಚ್ಚಕಟ್ಟಾಗಿ ಶರಣ ಮೇಳ ನಡೆದಿದೆ. ಅನಾರೋಗ್ಯದ ನಡುವೆ ಮಾತಾಜಿ 32ನೇ ಶರಣ ಮೇಳದಲ್ಲಿ ಭಾಗವಹಿಸಿ ಭಕ್ತರಿಗೆ ಆಶ್ಚರ್ಯ ಮೂಡಿಸಿದರು.

ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ, ಧಾರವಾಡದಲ್ಲಿ ಶರಣೋತ್ಸವ, ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವೋತ್ಸವ, ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಗಣಮೇಳ, ಕಾರವಾರ ಜಿಲ್ಲೆ ಉಳವಿಯಲ್ಲಿ ಲಿಂಗಾಯತ ಗಣಮೇಳ ಎಂಬ ಕಾರ್ಯಕ್ರಮದ ಮೂಲಕ ಬಸವತತ್ವವನ್ನು ಜನರಿಗೆ ತಲುಪಿಸುವ ಮೂಲಕ ಜನರಲ್ಲಿನ ಮೂಢನಂಬಿಕೆ, ಸಂಪ್ರದಾಯಗಳನ್ನು ಹೊಡೆದೋಡಿಸುವ ಕಾರ್ಯ ಮಾಡಿದರು.

ಶರಣ ಹೆಸರಿನಲ್ಲಿ ಪೀಠ

ಮಾತಾಜಿ ತಮ್ಮ 55 ವರ್ಷದ ಬದುಕಿನಲ್ಲಿ 6 ಪೀಠಗಳನ್ನು ಸ್ಥಾಪಿಸಿ ಅದರ ಮೂಲಕ ಶರಣ ತತ್ವಗಳನ್ನು ಭಿತ್ತರಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕೂಡಲಸಂಗಮದಲ್ಲಿ ಬಸವಧರ್ಮ ಪೀಠ, ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ, ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯ ಪೀಠ, ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಅಲ್ಲಮಪ್ರಭು ಯೋಗ ಪೀಠ, ಬೆಂಗಳೂರಿನ ಬಸವ ಗಂಗೋತ್ರಿಯಲ್ಲಿ ಚಿನ್ಮಯ ಜ್ಞಾನಿ ಚನ್ನಬಸವೇಶ್ವರ ಜ್ಞಾನಪೀಠ, ಕಾರವಾರ ಜಿಲ್ಲೆಯ ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠಗಳನ್ನು ಅವರು ಸ್ಥಾಪಿಸಿದ್ದಾರೆ.

ಮಾತಾಜಿ ಎಂ.ಎ ತತ್ವಶಾಸ್ತ್ರವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವಾಗ ಬರೆದ ಬಸವತತ್ವ ದರ್ಶನ ಎಂಬ ಗ್ರಂಥ ಅವರಿಗೆ ಪಠ್ಯ ಪುಸ್ತಕವಾಗಿತ್ತು ಎಂಬುದು ವಿಶೇಷ.

ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ

ಮಾತೆ ಮಹಾದೇವಿ ಲಿಂಗಾಯತ ಧರ್ಮದ ಚಲಿಸುವ ವಿಶ್ವವಿದ್ಯಾಲಯವೆಂದೇ ಹೆಸರಾಗಿದ್ದರು. ಬಸವಣ್ಣನವರು ಹಾಗೂ ವಚನ ಸಾಹಿತ್ಯ ಕುರಿತು ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಅವರು ರಚಿಸಿದ್ದಾರೆ. ಹಲವು ಮೌಲಿಕ ಪುಸಕ್ತಗಳನ್ನು ಪ್ರಕಟಿಸಿದ್ದಾರೆ.

ಬಸವತತ್ವ ದರ್ಶನ, ವಿಶ್ವಧರ್ಮ ಪ್ರವಚನ, ಗಂಗಾತರಂಗ, ವಿಶ್ವಕಲ್ಯಾಣ ಗೀತೆ, ಹೃದಯವೀಣೆ ಮೀಟಿದಾಗ, ಹೆಪ್ಪಿಟ್ಟ ಹಾಲು ಎಂಬ ಸಾಮಾಜಿಕ ಕಾದಂಬರಿ, ತರಂಗಿಣಿ ಎಂಬ ಅಕ್ಕಮಹಾದೇವಿ ಕುರಿತಾದ ಕಾಂದಬರಿ, ವೀರರಾಣಿ ಕೆಳದಿ ಚನ್ನಮ್ಮ ಎಂಬ ಐತಿಹಾಸಿಕ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. 400ಕ್ಕೂ ಹೆಚ್ಚು ಮೌಲಿಕ ಗ್ರಂಥಗಳು ಮಾತಾಜಿ ಅವರಿಂದ ರಚಿತಗೊಂಡಿವೆ.

ಹೆಪಿಟ್ಟ ಹಾಲು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಕ್ರಾಂತಿಯೋಗಿ ಬಸವಣ್ಣ ಎಂಬ ಚಲಚಿತ್ರದ ಕಥೆ–ಚಿತ್ರಕಥೆ ಬರೆದು, ನಿರ್ಮಿಸಿ, ನಿರ್ದೇಶನ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

***

ಜನನ: ಚನ್ನ (ಬುಧವಾರ) 1946ರ ಮಾರ್ಚ್ 13

ತಂದೆ: ಡಾ. ಬಸಪ್ಪ, ತಾಯಿ: ಗಂಗಮ್ಮ

1965ರ ಫೆಬ್ರುವರಿ 12: ಚಿತ್ರದುರ್ಗದಲ್ಲಿ ಸದ್ಗುರು ಲಿಂಗಾನಂದ ಸ್ವಾಮೀಜಿ ಅವರ ಮೊದಲ ಭೇಟಿ

1965: ಬಿ.ಎಸ್ಸಿ ಪದವಿ

1965ರ ಆಗಸ್ಟ್ 19: ಆಧ್ಯಾತ್ಮಿಕ ಬದುಕಿನತ್ತ ಆಸಕ್ತಿ ತೋರಿ ಬಸವ ಧರ್ಮಪ್ರಚಾರಕ್ಕೆ ನಿರ್ಧರಿಸಿ ಮನೆ ಬಿಟ್ಟರು

1965ರ ಆಗಸ್ಟ್ 19: ಡಾ.ಲಿಂಗಾನಂದ ಸ್ವಾಮೀಜಿ ಅವರಿಂದಇಷ್ಟಲಿಂಗ ದೀಕ್ಷೆ

1966ರ ಏಪ್ರಿಲ್ 5ರ ಅಕ್ಕಮಹಾದೇವಿ ಜಯಂತಿ ದಿನಲಿಂಗಾನಂದ ಮಹಾಸ್ವಾಮೀಜಿ ಅವರಿಂದ ಜಂಗಮ ದೀಕ್ಷೆ ಸ್ವೀಕಾರ

1966: ಋಷಿಕೇಶದಲ್ಲಿ ಸಾಧನೆ ಗಂಗಾತರಂಗ ಪುಸ್ತಕ ರಚನೆ

1967 ಮೇ: ‘ಬಸವ ತತ್ವ ದರ್ಶನ’ ರಚನೆ

1968 ಏಪ್ರಿಲ್ 13: ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ

1970ರ ಜನವರಿ 14: ಸಿದ್ಧರಾಮೇಶ್ವರ ಜಯಂತಿ ದಿನ ‘ಕಲ್ಯಾಣ ಕಿರಣ’ ಮಾಸ ಪತ್ರಿಕೆ ಮೊದಲ ಸಂಚಿಕೆ ಬಿಡುಗಡೆ

1970ರ ಏಪ್ರಿಲ್ 21: ಧಾರವಾಡದಲ್ಲಿ ಅಕ್ಕಮಹಾದೇವಿ ಮಹಿಳಾ ಜಗದ್ಗುಪೀಠ ಸ್ಥಾಪನೆ.ಪ್ರಥಮ ಪೀಠಾದ್ಯಕ್ಷರಾಗಿ ಲಿಂಗಾನಂದ ಸ್ವಾಮೀಜಿ ಅವರಿಂದ ಮಾತೆ ಮಹಾದೇವಿ ಪ್ರತಿಜ್ಞಾವಿಧಿ ಸ್ವೀಕಾರ

1973ರ ಡಿಸೆಂಬರ್ 9: ಮೊದಲ ಕಾದಂಬರಿ ‘ಹೆಪ್ಪಿಟ್ಟ ಹಾಲು’ ಬಿಡುಗಡೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ

1975ರ ಮೇ 4:ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ನಿರ್ಮಾಣ, ಬಸವ ಜಯಂತಿ ದಿನ ಉದ್ಘಾಟನೆ

1975ರ ಮೇ 14:ಬವಸವ ಧರ್ಮ ಪ್ರಚಾರಾರ್ಥ ಇಂಗ್ಲೆಂಡ್ ಪ್ರವಾಸ

1977: ವಿಶ್ವ ಕಲ್ಯಾಣ ಮಿಷನ್ (ಟ್ರಸ್ಟ್) ಸ್ಥಾಪನೆ

1978ರ ಅಕ್ಟೋಬರ್ 6: ಬೆಂಗಳೂರಿನ ಕುಂಬಳಗೋಡಿನಲ್ಲಿ 25 ಎಕರೆ ಜಾಗ ಖರೀದಿ. ಬಸವ ಗಂಗೋತ್ರಿ ಆಶ್ರಮ ನಿರ್ಮಾಣ

1980: ಬಸವ ಧರ್ಮ ಪ್ರಚಾರಾರ್ಥ ಅಮೆರಿಕ ಪ್ರವಾಸ

1983: ಗುರು ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರ ನಿರ್ಮಾಣ

1987: ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಆವೃತವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಹಾಗೂ ದೇವಾಲಯದ ಆಡಳಿತವನ್ನು ಸರ್ಕಾರವೇ ವಹಿಸಿಕೊಳ್ಳುವಂತೆ ಆಗ್ರಹಿಸಿ ಯಶಸ್ವಿ ಹೋರಾಟ. ಕೂಡಲಸಂಗಮ ಲಿಂಗಾಯತ ಧರ್ಮದ ಕ್ಷೇತ್ರ ಎಂದು ಘೋಷಣೆ

1988 ಜನವರಿ 13: ಕೂಡಲ ಸಂಗಮದಲ್ಲಿ ಮೊದಲನೇ ಶರಣ ಮೇಳ ಆರಂಭ

1988ರ ಜನವರಿ 13:ರಾಷ್ಟ್ರೀಯ ಬಸವದಳ ಪುನರ್‌ಸಂಘಟನೆ

1992 ಜನವರಿ 13: ಕೂಡಲ ಸಂಗಮದಲ್ಲಿ ಬಸವ ಧರ್ಮದ ಪೀಠ ಸ್ಥಾಪನೆ. ಪ್ರಥಮ ಪೀಠಾಧ್ಯಕ್ಷರಾಗಿ ಲಿಂಗಾನಂದ ಸ್ವಾಮೀಜಿ ಪೀಠಾರೋಹಣ

1996 ಜನವರಿ 13: ಬಸವಧರ್ಮ ಪೀಠದ ಎರಡನೇ ಜಗದ್ಗುರುವಾಗಿ ಮಾತೆ ಮಹಾದೇವಿ ಪೀಠಾರೋಹಣ

1996 ಜನವರಿ 14: ಕೂಡಲ ಸಂಗಮದ ಮಹಾಮನೆಯಲ್ಲಿ ಘನಲಿಂಗದ ಸ್ಥಾಪನೆ

1996ರ ಏಪ್ರಿಲ್ 14: ಅಕ್ಕಮಹಾದೇವಿ ಮಹಿಳಾ ಜಗದ್ಗುರು ಪೀಠಕ್ಕೆ ಮಾತೆ ಗಂಗಾದೇವಿ ಪೀಠಾರೋಹಣ

1996 ಆಗಸ್ಟ್ 9: ವಿಶ್ವಗುರು ಬಸವಣ್ಣನವರ ವಚನಗಳ ಸಂಗ್ರಹ ‘ಬಸವ ವಚನ ದೀಪ್ತಿ’ಯ ಬಿಡುಗಡೆ. ಅದರಲ್ಲಿ ‘ಕೂಡಲ ಸಂಗಮದೇವ’ ವಚನಾಂಕಿತ ತಿದ್ದಿ ‘ಲಿಂಗದೇವ’ ಸೇರಿಸಿದ ವಿಚಾರ ವಿವಾದಕ್ಕೆ ದಾರಿ.ರಾಜ್ಯದಾದ್ಯಂತ ಪ್ರತಿಭಟನೆ. ವಿವಾದ ನ್ಯಾಯಾಲಯಕ್ಕೆ

1996 ನವೆಂಬರ್ 3: ದೆಹಲಿಯಲ್ಲಿ ಬಸವೇಶ್ವರ ದಿವ್ಯಜ್ಞಾನ ವಿದ್ಯಾಲಯ ಸ್ಥಾಪನೆ

2002: ಬಸವ ಕಲ್ಯಾಣದಲ್ಲಿ ಮೊದಲನೆಯ ಕಲ್ಯಾಣ ಪರ್ವ ಕಾರ್ಯಕ್ರಮ. ಅಲ್ಲಮ ಪ್ರಭು ಶೂನ್ಯ ಪೀಠ ಸ್ಥಾಪನೆ

2004: ಬಸವ ಧರ್ಮ ಪ್ರಚಾರಾರ್ಥ ಅಮೆರಿಕ ಪ್ರವಾಸ

2004 ನವೆಂಬರ್ 1: ಬಸವ ಕಲ್ಯಾಣದಲ್ಲಿ ₹5 ಕೋಟಿ ವೆಚ್ಚದಲ್ಲಿ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಲೋಕಾರ್ಪಣೆ

2006: ಈಚಲಕರಂಜಿಯ ಅಲ್ಲಮಪ್ರಭು ಗಿರಿಯಲ್ಲಿ 15 ಎಕರೆ ಜಾಗ ಖರೀದಿ

2006 ಡಿಸೆಂಬರ್ 24: ನವದೆಹಲಿಯಲ್ಲಿ ಬಸವ ಮಂಟಪ ಉದ್ಘಾಟನೆ

2019: ದೆಹಲಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮಆಂದೋಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT