ಸಾವಿರಾರು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ನೆಚ್ಚಿನ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು. ಶಿವಳ್ಳಿ ಅವರಿಗಿದ್ದ ಜನಪರ ಕಾಳಜಿ, ಅವರ ಸೇವೆ ಹಾಗೂ ಒಡನಾಟವನ್ನು ಸ್ಮರಿಸಿದ ಹಲವು ನಾಯಕರು ಗದ್ಗದಿತರಾದರು. ಶಿವಳ್ಳಿ ಅವರ ಕುಟುಂಬದ ಜೊತೆಗೆ ಇರುವುದಾಗಿ ಭರವಸೆಯನ್ನೂ ನೀಡಿದರು. ಸಚಿವ ಡಿ.ಕೆ. ಶಿವಕುಮಾರ ಭಾವುಕರಾಗಿ ಮಾತನಾಡಿದರೆ, ಮಾಜಿ ಸಚಿವ ವಿನಯ ಕುಲಕರ್ಣಿ ಕಣ್ಣೀರಿಟ್ಟಿರು. ಹೋರಾಟದಿಂದಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಶಿವಳ್ಳಿ ಅವರು ಕೊನೆಯತನಕ ಪ್ರಾಮಾಣಿಕರಾಗಿ ಉಳಿದರು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.