ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಯ ತೋಡುವಾಗ ಬಿದ್ದ ಹಿಂಬದಿ ಮನೆಯ ಕಾಂಪೌಂಡ್‌: ಮುಂಜಾಗ್ರತೆಯಿಂದ ತಪ್ಪಿದ ಅನಾಹುತ

ಬಾಡಿಗೆದಾರರ ತೆರವು
Last Updated 4 ಮೇ 2019, 12:37 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ವಿದ್ಯಾಗಿರಿಯಲ್ಲಿ ಕಟ್ಟಡದ ಪಾಯ ತೆಗೆಯುವ ಸಂದರ್ಭದಲ್ಲಿ ಹಿಂಬದಿಯ ಮನೆಯ ಕಾಂಪೌಂಡ್‌ ಮತ್ತು ಪಾಯ ಕುಸಿದ ಪರಿಣಾಮ ರಾತ್ರೋರಾತ್ರಿ ಮನೆಯಲ್ಲಿದ್ದವರನ್ನು ತೆರವುಗೊಳಿಸಲಾಗಿದೆ. ಕುಮಾರೇಶ್ವರನಗರ ಕಟ್ಟಡ ದುರಂತ ನೆನಪಿನಿಂದ ಮಾಸುವ ಮೊದಲೇ ಮತ್ತೊಂದು ದೊಡ್ಡ ದುರಂತ ಅದೃಷ್ಟವಶಾತ್‌ ತಪ್ಪಿದಂತಾಗಿದೆ.

ವಿದ್ಯಾಗಿರಿಯ ಬೆಲ್ಲದ ಹೀರೊ ದ್ವಿಚಕ್ರವಾಹನ ಶೋರೂಂ ಪಕ್ಕದ ಜಾಗದಲ್ಲಿ ಗಂಗಾ ಫಾಸಲ್ಕರ್ ಎಂಬುವವರಿಗೆ ಸೇರಿದ ಜಾಗದಲ್ಲಿ ಕೆಳ ಮಹಡಿಯ ಕಟ್ಟಡದ ಪಾಯ ತೋಡುವ ಕೆಲಸ ಸಾಗಿತ್ತು. ಈ ನಿವೇಶನದ ಹಿಂಭಾಗದಲ್ಲಿರುವ ಶ್ರೀಕಾಂತ ದೇವಗಿರಿ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ನಾಲ್ಕು ಮನೆ ಮತ್ತು 2 ರೂಂಗಳಲ್ಲಿ ಹಲವರು ವಾಸವಿದ್ದರು. ವಾರದ ಹಿಂದೆಯೇ ಇಲ್ಲಿ ಮಣ್ಣು ಕುಸಿದಿದ್ದರಿಂದ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಶುಕ್ರವಾರ ಮಧ್ಯರಾತ್ರಿ ಈ ಗೋಡೆ ಕುಸಿದಿದೆ.

ಗೋಡೆ ಕುಸಿದ ಭೀತಿಯಿಂದ ಗಾಭರಿಗೊಂಡುಮನೆಯಲ್ಲಿದ್ದವರು ರಾತ್ರಿಯೇ ಮನೆ ತೆರವುಗೊಳಿಸಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಶನಿವಾರ ಬೆಳಿಗ್ಗೆ ಬಂದು ತಮ್ಮ ವಸ್ತುಗಳನ್ನು ಬೇರೆ ಮನೆಗೆ ಸಾಗಿಸುತ್ತಿದ್ದ ದೃಶ್ಯ ಕಂಡುಬಂತು.

ಈ ಕುರಿತು ಪ್ರತಿಕ್ರಿಯಿಸಿದ ಕಟ್ಟಡದ ಮಾಲೀಕ ಶ್ರೀಕಾಂತ ಅವರ ಪತ್ನಿ ಭಾರತಿ ದೇವಗಿರಿ, ‘ಕಟ್ಟಡ ನಿರ್ಮಿಸಲು ಪಾಯ ತೆಗೆಯುತ್ತಿರುವ ಕುರಿತು ಫಾಸಲ್ಕರ್‌ ಅವರು ತಿಳಿಸಿಲ್ಲ. ನಾಲ್ಕು ದಿನಗಳ ಹಿಂದೆಯೇ ನಮ್ಮ ಮನೆಯ ಪಾಯದ ಕೆಳಗಿನ ಮಣ್ಣು ಸಣ್ಣದಾಗಿ ಕುಸಿದಿತ್ತು. ಆಗಲೇ ಪೊಲೀಸರಿಗೆ ದೂರು ನೀಡಲು ವಿದ್ಯಾಗಿರಿ ಠಾಣೆಗೆ ಹೋಗಿದ್ದೆವು. ದೂರು ಸ್ವೀಕರಿಸದೆ, ಪರಸ್ಪರ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಕಳುಹಿಸಿದರು. ಅದರಂತೆಯೇ ನಾವು ಫಾಸಲ್ಕರ್ ಅವರನ್ನು ಸಂಪರ್ಕಿಸಿ ತಿಳಿಸಿದೆವು. ಜತೆಗೆ ಪಾಲಿಕೆಗೂ ದೂರು ನೀಡಿದೆವು. ಮನೆಯ ಪಾಯ ಕುಸಿಯದಂತೆ ಕಾಂಕ್ರೀಟ್‌ನಲ್ಲಿ ತಡೆಗೋಡೆ ನಿರ್ಮಿಸಿದ್ದರು. ಈಗ ಅದೂ ಕುಸಿದು ನಮ್ಮ ಕಟ್ಟಡ ಅಪಾಯದಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಬಂದ ವಲಯ 12ರ ಸಹಾಯಕ ಆಯುಕ್ತ ವಿ.ಎಂ. ಸಾಲಿಮಠ, ‘ಏ. 27ರಂದು ಶ್ರೀಕಾಂತ ದೇವಗಿರಿ ಅವರು ದೂರು ನೀಡಿದ್ದರು. ತಕ್ಷಣವೇ ಪಾಯ ತೋಡುವ ಕೆಲಸನ್ನು ಸ್ಥಗಿತಗೊಳಿಸಲು ಸೂಚಿಸಲಾಗಿತ್ತು. ಜತೆಗೆ ಪಾಲಿಕೆ ಅನುಮತಿ ಪಡೆದ ನಂತರ ಅಕ್ಕಪಕ್ಕದವರಿಗೆ ತೊಂದರೆ ಆಗದಂತೆ ಕಟ್ಟಡ ನಿರ್ಮಾಣ ಮಾಡುವಂತೆ ನೋಟಿಸ್‌ ಕೊಡಲಾಗಿತ್ತು’ ಎಂದು ತಿಳಿಸಿದರು.

‘ಕಟ್ಟಡದ ಪಾಯ ತೆಗೆಯುವ ಮೊದಲು ಮಣ್ಣು ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಜತೆಗೆ ಕಟ್ಟಡದ ವಿನ್ಯಾಸಕಾರ ಮತ್ತು ಎಂಜಿನಿಯರ್ ಸಹಿತ ಬಂದು ಕಟ್ಟಡ ನಿರ್ಮಾಣ ಕುರಿತು ಚರ್ಚಿಸುವಂತೆಯೂ ತಿಳಿಸಲಾಗಿತ್ತು. ಈ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಕುರಿತು ಇನ್ನೂ ಪರಿಶೀಲನೆ ಹಂತದಲ್ಲಿದೆ. ಹೀಗಾಗಿ ಕೆಲಸ ನಿಲ್ಲಿಸುವಂತೆ ಈಗಾಗಲೇ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಸಿಪಿ ಎಂ.ಎನ್.ರುದ್ರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT