ಹುಬ್ಬಳ್ಳಿ: ‘ಉದ್ಯಮನಗರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಮಾದರಿ ಪ್ರದೇಶವನ್ನಾಗಿ ರೂಪಿಸಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ಇಲ್ಲಿನ ಪಿ.ಬಿ. ರಸ್ತೆಯ ಉದ್ಯಮ ನಗರಕ್ಕೆ ಶನಿವಾರ ಭೇಟಿ ನೀಡಿ ಸ್ಥಳೀಯ ಕಾರ್ಖಾನೆ ಮಾಲೀಕರ ಕುಂದುಕೊರತೆ ಆಲಿಸಿದ ಅವರು, ‘ಈ ಪ್ರದೇಶದಲ್ಲಿ 30 ಸಣ್ಣ ಕೈಗಾರಿಕೆಗಳಿದ್ದು, 400ಕ್ಕೂ ಅಧಿಕ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.
‘ಇಲ್ಲಿ ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು, ಗಟಾರ, ಬೀದಿ ದೀಪ ಸೇರಿದಂತೆ ಇತರ ಮೂಲಸೌಲಭ್ಯಗಳನ್ನು ಒದಗಿಸಲು ವಿಸೃತ ಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ, ಸ್ಥಳೀಯರು ಹಾಗೂ ಕೈಗಾರಿಕೆಗಳ ಮಾಲೀಕರು ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದರು.