ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮಂಗಳವಾರದಿಂದ ಮೂರುದಿನ ನಡೆಯಲಿರುವ ಗಣೇಶೋತ್ಸವದ ಪೂರ್ವಸಿದ್ಧತೆಗೆ ಇಂದು ಚಾಲನೆ ನೀಡಲಾಯಿತು.
ಶಾಸಕರಾದ ಮಹೇಶ ಟೆಂಗಿನಕಾಯಿ ಮತ್ತು ಅರವಿಂದ ಬೆಲ್ಲದ ಅವರ ಸಮ್ಮುಖದಲ್ಲಿ ಹಂದರಗಂಬ ಪೂಜೆ ನೆರವೇರಿತು. ಪೆಂಡಾಲ್ ಹಾಗೂ ಗಣೇಶ ಮಂಟಪ ನಿರ್ಮಾಣ ಕಾರ್ಯ ಮುಂದುವರಿದಿದೆ.
'ಮೈದಾನದಲ್ಲಿ ಮೂರುದಿನ ಶಾಂತಿಯುತವಾಗಿ ಗಣೇಶ ಉತ್ಸವ ಆಚರಿಸುತ್ತೇವೆ. ಹಂದರಗಂಬ ಪೂಜೆ ನೆರವೇರಿಸುವ ಮೂಲಕ ಪೆಂಡಾಲ್ ಹಾಗೂ ಇತರ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಮೂರುಸಾವಿರ ಮಠದಿಂದ ಮೈದಾನದವರೆಗೆ ಮೆರವಣಿಗೆ ಮೂಲಕ ಗಣೇಶಮೂರ್ತಿ ತರಲಾಗುವುದು. ಸೆ. 21 ರಂದು ಬೆಳಿಗ್ಗೆ 11.30ಕ್ಕೆ ವಿಸರ್ಜನಾ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು' ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಮಹಾಮಂಡಳದ ಕಿರಣ ಗುಡ್ಡದಕೇರಿ, ಜಯತೀರ್ಥ ಕಟ್ಟಿ, ಸಂಜಯ ಬಡಸ್ಕರ, ಸುಭಾಷಸಿಂಗ್ ಜಮಾದಾರ, ಬಸವರಾಜ ಕುಂದಗೋಳಮಠ, ಮಹೇಂದ್ರ ಕೌತಾಳ, ಮಾದೇವ ಕರಮರಿ ಇದ್ದರು.