ಹುಬ್ಬಳ್ಳಿ: ಬಿಜೆಪಿ ಸರ್ಕಾರ ರೈತ ವಿರೋಧಿ ಸುಗ್ರೀವಾಜ್ಞೆ ಜಾರಿಗೆ ತಂದು ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಪದಾಧಿಕಾರಿಗಳು ಗುರುವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ತಾರಿಹಾಳ ಹತ್ತಿರದ ರಾಷ್ಟ್ರೀಯ ಹೆದ್ದಾರಿ ತಡೆದ ಸಮಿತಿ ಸದಸ್ಯರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಆರ್ಕೆಎಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಜಡಗಣ್ಣನವರ ‘ಕೋವಿಡ್ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ, ರೈತರ ಹಾಗೂ ಕೂಲಿಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಇಂಥ ಸಮಯದಲ್ಲೂ ಸುಗ್ರೀವಾಜ್ಞೆಗಳನ್ನು ಹೇರುತ್ತಿರುವುದು ಸರಿಯಲ್ಲ’ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮೇಶ ಲಿಗಾಡೆ ಮಾತನಾಡಿ ‘ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ವಿದ್ಯುತ್ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಹೊಸ ಕಾಯ್ದೆಗಳನ್ನು ರೂಪಿಸಿರುವುದು ಬಿಜೆಪಿಯ ರೈತ ವಿರೋಧಿ ಧೋರಣೆಗಳನ್ನು ತೋರಿಸುತ್ತದೆ. ಬಿಜೆಪಿಯ ಜನಪರ ಘೋಷಣೆ, ಭರವಸೆಗಳು ಚುನಾವಣೆಗೆ ಮಾತ್ರ ಸೀಮಿತವಾಗಿವೆ’ ಎಂದು ಟೀಕಿಸಿದರು.
ಆರ್ಕೆಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣು ಗೋನವಾರ, ರಾಜ್ಯ ರೈತ ಸಂಘದ ಚಂದ್ರಪ್ಪ ಕಬ್ಬೂರ, ಸುಭಾಶ ಕಲಕೇರಿ, ಸಂಗನಗೌಡ ಪಾಟೀಲ, ಪ್ರವೀಣ ಎಲ್, ಮಂಜುನಾಥ ಮಂಜುನಾಥ ಮುಂದಿನಮನೆ, ಬಸಪ್ಪ ಬೆಟದೂರ ಇದ್ದರು.