ಧಾರವಾಡ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದೆ.
ಗುರುವಾರ ಬೆಳಿಗ್ಗೆಯಿಂದ ಏಕೋಪ್ರಕಾರ ಮಳೆ ಸುರಿಯುತ್ತಲೇ ಇದೆ. ಮಲೆನಾಡು ಪ್ರದೇಶಗಳಾದ ಕಲಘಟಗಿ, ಅಳನಾವರ ಭಾಗದಲ್ಲೂ ಉತ್ತಮ ಮಳೆ ಸುರಿಯುತ್ತಿದೆ. ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿಯಲ್ಲಿ ಸಾಧಾರಣವಾಗಿ ಮಳೆಯಾಗುತ್ತಿರುವ ವರದಿಯಾಗಿದೆ.
ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ ಕಲಘಟಗಿಯಲ್ಲಿ 12.2 ಸೆಂ. ಮೀ., ಧಾರವಾಡ 5, ಹುಬ್ಬಳ್ಳಿ 4, ಕುಂದಗೋಳ 6 ಹಾಗೂ ನವಲಗುಂದ 1 ಸೆಂ. ಮೀ. ಮಳೆ ಸುರಿದಿದೆ.
ನಗರ ಪ್ರದೇಶದಲ್ಲಿ ಚರಂಡಿ ಹಾಗೂ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಗ್ರಾಮೀಣ ಭಾಗಗಳ ಕೆರೆಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ.