ಹುಬ್ಬಳ್ಳಿ: ನಗರದ ರಜಪೂತ ಸಮಾಜದಿಂದ ಅರವಿಂದ ನಗರದಲ್ಲಿ ಗುರುವಾರ ಜರುಗಿದ ಸಾಮೂಹಿಕ ಉಪನಯಕ ಕಾರ್ಯಕ್ರಮದಲ್ಲಿ 56 ವಟುಗಳಿಗೆ ಸಾಮೂಹಿಕ ಉಪನಯನ ನೆರವೇರಿತು.
ಕಾರ್ಯಕ್ರಮದಲ್ಲಿ ವಟುಗಳಿಗೆ ಶುಭ ಕೋರಿ ಮಾತನಾಡಿದ ಶಾಸಕ ಜಗದೀಶ ಶೆಟ್ಟರ್, ‘ರಜಪೂತ ಸಮುದಾಯವು ಚಿಕ್ಕದಾದರೂ ಅತ್ಯಂತ ಒಗ್ಗಟ್ಟಿನಿಂದ ಇದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಸ್ಕಾರ ನೀಡುವಂತಹ ಸಾಮೂಹಿಕ ಉಪನಯನ ಸೇರಿದಂತೆ, ಸಮುದಾಯದ ಪ್ರಗತಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಸಮುದಾಯದ ಕಲ್ಯಾಣ ಮಂಪಟ ಮತ್ತು ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹2 ಕೋಟಿ ಅನುದಾನ ಮಂಜೂರು ಮಾಡಿಸುವಂತೆ, ಸಮುದಾಯದ ಮುಖಂಡರು ಶೆಟ್ಟರ್ ಅವರಿಗೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ‘ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
ಸಮುದಾಯದ ಮುಖಂಡರಾದ ಸುಭಾಸಸಿಂಗ ಜಮಾದಾರ, ವಿದ್ಯಾ ಜಾವೂರ, ಶೋಭಾ ಕಿಲ್ಲೇದಾರ, ಉಮೇಶ್ ಸಿಂಗ ಅಂಗಡಿ, ಪ್ರತಾಪ್ ಹಜೇರಿ, ಎಂ.ಆರ್. ರಜಪೂತ, ರಜತ ಹಜೇರಿ, ಶಿವರಾಜಸಿಂಗ ಜಮಾದಾರ, ರೂಪಾ ಜಮಾದಾರ, ಶ್ರೀನಿವಾಸಸಿಂಗ ರಜಪೂತ, ಬಲದೇವಸಿಂಗ ಠಾಕೂರ, ಅನಂತ ಸಿಂಗ್ ಇದ್ದರು.