ಹುಬ್ಬಳ್ಳಿ: ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿಕೊಂಡ ದಿನವಾದ ಗಣರಾಜ್ಯೋತ್ಸವವನ್ನು ನಗರದ ವಿವಿಧೆಡೆ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ದೇಶಪ್ರೇಮ ಉಕ್ಕಿಸುವ ವಿದ್ಯಾರ್ಥಿಗಳ ನೃತ್ಯ, ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಮೆರಗು ತಂದವು.
ನಗರ ತಾಲ್ಲೂಕು ಆಡಳಿತದಿಂದ ನೆಹರು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ತಹಶೀಲ್ದಾರ್ ಶಶಿಧರ್ ಮಾಡ್ಯಾಳ ನೆರವೇರಿಸಿದರು. ಶಾಸಕ ಜಗದೀಶ ಶೆಟ್ಟರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಮಹಾನಗರ ಪಾಲಿಕೆ ವತಿಯಿಂದ ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಧ್ವಜಾರೋಹಣ ನೆರವೇರಿಸಿದರು. ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ನಜೀರ್ ಅಹ್ಮದ್ ಹೊನ್ಯಾಳ ಸೇರಿದಂತೆ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಅಡಳಿತದಿಂದ ಮಿನಿ ವಿಧಾನಸೌಧದ ಎದುರು ನಡೆದ ಕಾರ್ಯಕ್ರಮದ ಧ್ವಜಾರೋಹಣವನ್ನು ತಹಶೀಲ್ದಾರ್ ಪ್ರಕಾಶ ನಾಶಿ ನೆರವೇರಿಸಿದರು.