ಧಾರವಾಡ: ಕ್ಷೇತ್ರ ಕಾರ್ಯವು ಸಾಹಿತಿ ರಹಮತ್ ತರೀಕೆರೆ ಅವರ ಸಂಶೋಧನಾ ಬರಹಗಳ ವಿಶೇಷ. ಕ್ಷೇತ್ರ ಕಾರ್ಯವನ್ನು ಜ್ಞಾನ ಕಟ್ಟುವ ಮಾರ್ಗವಾಗಿ ಅವರು ಬಳಸಿಕೊಂಡಿದ್ದಾರೆ ಎಂದು ಸಾಹಿತಿ ರಂಗನಾಥ ಕಂಟನಕುಂಟೆ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾ ಭವನದಲ್ಲಿ ಸೋಮವಾರ ನಡೆದ ಶಾಂತಲಾ ಪಾಟೀಲ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸೂಫಿಗಳು’, ‘ಶಾಕ್ತ ಪಂಥ’, ’ನಾಥ ಪಂಥ’ ಮೊದಲಾದ ಕೃತಿಗಳು ಅವರ ಕ್ಷೇತ್ರ ಕಾರ್ಯದ ಉತ್ಪನ್ನಗಳು. ಕ್ಷೇತ್ರದ ಕಾರ್ಯದ ಮೂಲಕ ಅವರು ಕಟ್ಟಿಕೊಟ್ಟ ಕರ್ನಾಟಕದ ಜನರ ಅರಿವು ಅವರನ್ನು ಕನ್ನಡದ ಸಂಶೋಧನಾ ಲೇಖಕರ ಪಟ್ಟಿಯಲ್ಲಿ ಅವರನ್ನು ವಿಶೇಷ ಸಂಶೋಧಕರವಾಗಿ ಮಾಡಿದೆ ಎಂದು ಹೇಳಿದರು.
ವಿವಿಧ ಪ್ರದೇಶ, ಸಮುದಾಯಗಳ, ಕುಲಕಸುಬಗಳ ಅರಿವು ಅವರು ಸಂಶೋಧನಾ ಗ್ರಂಥಗಳಲ್ಲಿ ಇದೆ. ಅವರ ಒಟ್ಟು ಬರಹಗಳಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಕೂಡು ಸಂಸ್ಕೃತಿ ಮತ್ತು ಸಂಕರ ಸಂಸ್ಕೃತಿ ಎಂದು ಅವರು ವಿವರಿಸಿದ್ದಾರೆ. ಅವರು ಕರ್ನಾಟಕದ ಬಹುತ್ವದ ಸಂಸ್ಕೃತಿಯನ್ನು ರೂಪಿಸಿದವರು. ಅವರ ಗ್ರಂಥಗಳು ಕರ್ನಾಟಕ ಬಗ್ಗೆ ಸಂಶೋಧನೆಗೆ ಆಕರಗಳಾಗಿವೆ ಎಂದರು.
ಹೊಸ ತಲೆಮಾರಿನವರು ಇಂಥ ಕಾರ್ಯಕ್ರಮಗಳು ಒಳಗೊಳ್ಳುತ್ತಿಲ್ಲ. ಹೀಗಾದರೆ ಹೊಸ ಆಲೋಚನಾ ಕ್ರಮಗಳಿಗೆ ಹೊಸ ತಲೆಮಾರಿನವರು ಪ್ರವೇಶ ಪಡೆಯುವುದು ಹೇಗೆ? ಇದು ಬಿಕ್ಕಟ್ಟಿನ ಕಾಲ. ಸಂಶೋಧಕರು ಸತ್ಯ ಹೇಳಲು ನೂರು ಬಾರಿ ಯೋಚಿಸಬೇಕಾದ ಸ್ಥಿತಿ ಇದೆ ಎಂದು ಅವರು ಹೇಳಿದರು.
ರಹಮತ್ ತರೀಕೆರೆ ಅವರಿಗೆ ಶಾಂತಲಾ ಪಾಟೀಲ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ₹10 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ.
ವೆಂಕಟೇಶ ಮಾಚಕನೂರು ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ.ಎಂ.ಚಂದ್ರಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಶೈಲ ಉದ್ದಾರ ಇದ್ದರು.