ಹುಬ್ಬಳ್ಳಿ: ‘12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಮೊದಲಿಗೆ ಪ್ರತಿಭಟನಾತ್ಮಕವಾಗಿದ್ದರೂ, ನವ ಸಮಾಜ ನಿರ್ಮಾಣ ಅವುಗಳ ಉದ್ದೇಶವಾಗಿತ್ತು’ ಎಂದು ಚರಂತೇಶ್ವರ ವಿರಕ್ತಮಠದ ಶರಣಬಸವ ದೇವರು ಹೇಳಿದರು.
ನಗರದ ಉಣಕಲ್ಲದ ಸಿದ್ಧೇಶ್ವರ ಶ್ರೀ ಹೊಸಮಠದಲ್ಲಿ ಯುಗಾದಿ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜ ಸುಧಾರಣೆ ಮೂಲಕ ಸಮಾನತೆ ಜಾರಿಗೆ ಶರಣರು ಶ್ರಮಿಸಿದರು. ಇಡೀ ಜೀವನವನ್ನು ಭಗವಂತನ ಸಾಕ್ಷಾತ್ಕಾರಕ್ಕಾಗಿ ಮೀಸಲಿಟ್ಟಿದ್ದರು. 12ನೇ ಶತಮಾನದ ನಂತರವೂ ಅನೇಕ ಮಹನೀಯರು ಇದೇ ದಾರಿಯಲ್ಲಿ ಸಾಗಿದರು. ಸಿದ್ಧಪ್ಪಜ್ಜನವರು ಸಹ ಸಂಪತ್ತು ತ್ಯಜಿಸಿ, ಲೋಕಕಲ್ಯಾಣಕ್ಕೆ ಜೀವನ ಮುಡಿಪಿಟ್ಟರು’ ಎಂದರು.
ಶ್ರೀಮಠದ ಟ್ರಸ್ಟ್ ಕಮಿಟಿಯವರನ್ನು ಸನ್ಮಾನಿಸಲಾಯಿತು. ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ಇದ್ದರು.