ಹುಬ್ಬಳ್ಳಿ: ‘ಹಳೆಯ ಸಾಂಪ್ರದಾಯಿಕ ಮೌಲ್ಯಗಳ ವಿರುದ್ಧ ಹೋರಾಡಿ, ಬದುಕಿನ ವಾಸ್ತವತೆ ಚಿತ್ರಿಸುವುದೇ ಸಾಹಿತ್ಯ. ಇದೇ ತರಾಸು ಅವರ ಕಾದಂಬರಿಗಳ ತಿರುಳಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ದುಷ್ಯಂತ ನಾಡಗೌಡ ತಿಳಿಸಿದರು.
ನಗರದ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಾಸು ಅಭಿಮಾನಿಗಳ ಬಳಗದಿಂದ ಶನಿವಾರ ಆಯೋಜಿಸಿದ್ದ ತರಾಸು ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಳಗನಾಥರಂತೆ ವಾಚನಾಭಿರುಚಿ ಹುಟ್ಟಿಸಿದವರು ತರಾಸು. ತಮ್ಮ ಕಾದಂಬರಿಗಳ ಮೂಲಕ ಜಾತಿ ವ್ಯವಸ್ಥೆ, ಶಾಸ್ತ್ರ ಪದ್ಧತಿಯನ್ನು ಪ್ರಶ್ನಿಸಿದರು. ಸ್ತ್ರೀ ಸ್ವಾತಂತ್ರ್ಯ, ಸಂಬಂಧಗಳ ಮೌಲ್ಯ, ಸತ್ಯ, ಆತ್ಮವಿಮರ್ಶೆಯ ಮಹತ್ವ ಸಾರಿದರು. ಸತ್ಯಕ್ಕೆ ಮನ್ನಣೆ ನೀಡದಿದ್ದರೆ ಅದು ಸತ್ತು ಹೋಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದರು’ ಎಂದರು.
‘ಮಾನವೀಯತೆಯೇ ಮಹತ್ತರ ವಾದ ಮೌಲ್ಯ ಎಂದು ಒಪ್ಪಿಕೊಂಡಾದ ಇತರ ಮೌಲ್ಯಗಳನ್ನು ವಿರೋಧಿಸಬೇಕಾ ಗುತ್ತದೆ. ಸಮಕಾಲೀನ ಸಾಹಿತ್ಯದಲ್ಲಿ ಇದನ್ನು ಪ್ರತಿಪಾದಿಸಿದ ತರಾಸು, ಭಾಷೆಯ ಚೆಲುವಿಗೂ ಆದ್ಯತೆ ನೀಡಿದ್ದಾರೆ. ಸುಂದರ ಘಟನಾವಳಿಗಳಿ ರುವ ಅವರ ಕಾದಂಬರಿಗಳು ಸಂತೋಷ ನೀಡುವಲ್ಲಿ ಎಂದಿಗೂ ಮೋಸ ಮಾಡುವುದಿಲ್ಲ’ ಎಂದು ಹೇಳಿದರು.
ಹುಲಕೋಟಿಯ ಕನ್ನಡ ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ ಮಾತನಾಡಿ, ‘ಸ್ತ್ರೀಯರು ಕಾದಂಬರಿ ಓದಿದರೆ ಅಡ್ಡದಾರಿ ಹಿಡಿಯುತ್ತಾರೆ ಎನ್ನುತ್ತಿದ್ದ ಕಾಲಘಟ್ಟದಲ್ಲಿ ಧೈರ್ಯವಾಗಿ ಓದುವಂತೆ ತರಾಸು ಕಾದಂಬರಿಗಳು ಪ್ರೇರೇಪಿಸಿ ದವು. ಬರೆದೇ ಬದುಕುವೆ ಎನ್ನುತ್ತಿದ್ದ ಅವರು ಬರೆದಂತೆ ಬದುಕಿದರು. ಟೀಕಿಸಿದವರಿಂದಲೆ ಸನ್ಮಾನ ಮಾಡಿಸಿಕೊಂಡರು. ಪ್ರಗತಿಶೀಲ ಸಾಹಿತ್ಯ ಪಂಥ ಬೇಗನೆ ಕರಗಿಹೋದಂತೆ, ಬರಹಗಾರರೂ ಮರೆಯಾದರು. ತರಾಸು ಕುರಿತ ಉಪನ್ಯಾಸ ಕಾರ್ಯಕ್ರಗಳು ಹೆಚ್ಚಾಗಿ ನಡೆದಿರುವುದು ವಿಷಾದನೀಯ’ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಂತಾ ನಾಡಿಗೇರ ಅವರಿಗೆ ₹5,001, ಪದ್ಮಜಾ ಉಮರ್ಜಿ (ದ್ವಿತೀಯ) ಅವರಿಗೆ ₹3,001, ಕೆ.ಎನ್. ಶಶಿಧರ (ತೃತೀಯ) ಅವರಿಗೆ ₹2,001, ಬಸವರಾಜ ಹರಿಹರ ಹಾಗೂ ಶೀಲಾ ಎ. ಅವರಿಗೆ ತಲಾ ₹1,001 ನಗದು ಬಹುಮಾನ ನೀಡಲಾಯಿತು.
ಪ್ರೊ. ಮಹೇಶ ದ್ಯಾವಪ್ಪನವರ, ಪ್ರೊ. ಎಸ್.ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬಳಗದ ಉಪಾಧ್ಯಕ್ಷ ಲಿಂಗರಾಜ ಅಂಗಡಿ, ಕಾರ್ಯಾಧ್ಯಕ್ಷ ಕೆ.ಎಸ್. ಕೌಜಲಗಿ, ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಸಿ. ಮುಳ್ಳಳ್ಳಿ, ಬಿ.ಎಸ್. ಮಾಳವಾಡ, ಕವಿತಾ ಕಲಕಬಂಡಿ ಇದ್ದರು.