ಧಾರವಾಡ: ಕೊಲೆ ಪ್ರಕರಣದ ವಿಚಾರಣೆಗೆ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಆರೋಪಿಯು, ಸಮೀಪದ ಸತ್ತೂರಿನ ಲಾಡ್ಜ್ನಲ್ಲಿ ಯುವತಿ ಜೊತೆಗಿದ್ದ ಪ್ರಕರಣ ನಡೆದಿದೆ. ಲಾಡ್ಡ್ ಮೇಲೆ ದಾಳಿ ನಡೆಸಿದ ಪೊಲೀಸರು ಆತನ ವಶಕ್ಕೆ ಪಡೆದರು.
ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಆರೋಪಿ ಬಚ್ಚಾ ಖಾನ್ನನ್ನು ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿತ್ತು. ವಿಚಾ ರಣೆಗೆ ಆತನನ್ನು ಇಲ್ಲಿನ ನ್ಯಾಯಾಲಯಕ್ಕೆ ಶನಿವಾರ ಕರೆತಂದ ವೇಳೆ ಸತ್ತೂರು ಬಳಿಯ ಲಾಡ್ಜ್ನಲ್ಲಿ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯಲು ಪೊಲೀಸರೇಆತನಿಗೆ ವ್ಯವಸ್ಥೆ ಮಾಡಿಕೊಟ್ಟಿರುವುದು ಈಗ ಬೆಳಕಿಗೆ ಬಂದಿದೆ.
‘ಬಚ್ಚಾ ಖಾನ್ ಬರುವ ಮೊದಲೇ ಯುವತಿ ಲಾಡ್ಜ್ ಕೋಣೆಯೊಳಗಿದ್ದಳು. ಪೊಲೀಸರು ಆತನನ್ನು ಅಲ್ಲಿಗೆ ಕರೆತಂದು ಬಿಟ್ಟರು.ಈ ಖಚಿತ ಮಾಹಿತಿ ಆಧರಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಮತ್ತು ಇತರ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯನ್ನು ವಿದ್ಯಾಗಿರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪ್ರತಿ ಬಾರಿ ವಿಚಾರಣೆಗೆ ಬರುವಾಗ ಈತ ನಗರದ ಸುತ್ತಮುತ್ತಲಿನ ಲಾಡ್ಜ್ಗಳನ್ನು ಮೊದಲೇ ಕಾಯ್ದಿರಿಸಿ, ಖಾಸಗಿ ಸಮಯ ಕಳೆಯುತ್ತಿದ್ದ ಎಂಬ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ.