ಕಲಘಟಗಿ: ನೊಂದ ಶಿಕ್ಷಕಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಶಂಕರ ಹುದ್ದಾರ ಎಂಬುವರು ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ತಾಲ್ಲೂಕಿನ ಕುರುವಿನಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕಿ ಪುಷ್ಪಲತಾ ಕಣವಿ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೂ ವರ್ಗಾವಣೆ ಮಾಡಲಾಗಿದೆ. ಇದನ್ನು ವಿರೋಧಿಸಿ ಸತ್ಯಾಗ್ರಹ ಮಾಡುತ್ತಿದ್ದೇನೆ. ನ್ಯಾಯಕ್ಕಾಗಿ ಆಗ್ರಹಿಸಿದರೂ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಂಕರ ಬೇಸರ ವ್ಯಕ್ತಪಡಿಸಿದರು.
ಬಿಇಒ ಉಮಾದೇವಿ ಬಸಾಪುರ ಸ್ಥಳಕ್ಕೆ ಬಂದು ಕುರುವಿನಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಫ್. ಪಾಟೀಲ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗುವುದು ಎಂದು ಆದೇಶ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಂಕರ ಹುದ್ದಾರ ಡಿ. 28ರಂದು ಮುಖ್ಯ ಶಿಕ್ಷಕನ ವರ್ಗಾವಣೆ ಆದೇಶ ನೀಡಿ ಮರಳಿ ಅದೇ ಶಾಲೆಗೆ ನಿಯೋಜನೆ ಮಾಡಿದ್ದೀರಿ. ಆದ್ದರಿಂದ ಈಗಿನ ಆದೇಶವನ್ನೂ ಒಪ್ಪುವುದಿಲ್ಲ ಎಂದರು.
ಪಾಟೀಲ ಅವರನ್ನು ಕಡ್ಡಾಯವಾಗಿ ಬೇರೆ ಶಾಲೆಗೆ ನಿಯೋಜನೆ ಮಾಡಬೇಕು. ಸ್ಥಳಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳು ಬರಬೇಕು. ಆಗ ಮಾತ್ರ ನನ್ನ ಹೋರಾಟ ನಿಲ್ಲಿಸುವೆ ಎಂದರು.
ತಾಲ್ಲೂಕು ಪಂಚಾಯ್ತಿ ಇಓ ಶಿವಪುತ್ರಪ್ಪ ಮಠಪತಿ, ಸಿಪಿಐ ಪ್ರಭು ಸೂರಿನ, ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್, ಶಿಕ್ಷಣ ಸಂಯೋಜನಾಧಿಕಾರಿ ಪುಟ್ಟಪ್ಪ ಭಜಂತ್ರಿ ಇದ್ದರು.