ಮಂಡ್ಯ: ‘ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹಲವು ಬಾರಿ ಆಧಿಕಾರ ನಡೆಸಿವೆ. ಆದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ’ ಎಂದು ಪಕ್ಷೇತರ ಅಭ್ಯರ್ಥಿ ಎಂ.ಬಿ.ನಾಗಣ್ಣಗೌಡ ಹೇಳಿದರು.
35ನೇ ವಾರ್ಡ್ನ ಎಸ್.ಡಿ.ಜಯರಾಂ ಬಡಾವಣೆಯಲ್ಲಿ ಬುಧವಾರ ಪ್ರಚಾರ ನಡೆಸಿ ಅವರು ಅವರು ಮಾತನಾಡಿದರು.
‘ರೈತರ ಜೀವನಾಡಿ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗದೇ ಶಾಶ್ವತವಾಗಿ ಮುಚ್ಚುವ ಹುನ್ನಾರ ನಡೆಸುತ್ತಿವೆ. ಮೈಷುಗರ್ ಕಾರ್ಖಾನೆ ಇಂತಹ ಸ್ಥಿತಿ ತಲುಪಲು ಈ ಎರಡೂ ಪಕ್ಷಗಳ ಬೇಜಾವಾಬ್ದಾರಿ ಕಾರಣ. ಈ ಬಾರಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಹಣ ಹಂಚಿಕೆ ಮಾಡುವ ಹನ್ನಾರವಿದ್ದು, ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಕ್ರಮ ವಹಿಸಬೇಕು. ಕ್ಷೇತ್ರದ ಮತದಾರರು ಚುನಾವಣೆಗಳನ್ನು ಅಭಿವೃದ್ಧಿ ಆಧಾರದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಪ್ರಜ್ಞಾವಂತ ಮತದಾರರು ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯ ಪಾತ್ರ ನಿರ್ವಹಿಸಬೇಕು’ ಎಂದು ಹೇಳಿದರು.
‘ಮಂಡ್ಯ ನಗರ ಮೂಲಭೂತ ಸೌಕರ್ಯಗಳಿಲ್ಲದೆ ನರಳುತ್ತಿದೆ. ಜನರ ಮಧ್ಯೆ ಇದ್ದು, ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಮತದಾರರು ಮನ್ನಣೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಮಂಡ್ಯ ಕ್ಷೇತ್ರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಸಲುವಾಗಿ ಸ್ಪರ್ಧೆಮಾಡಿದ್ದೇವೆ’ ಎಂದು ಹೇಳಿದರು.
ಪ್ರಚಾರ ಸಭೆಯಲ್ಲಿ ಗಣೇಶ್, ಸುನಂದಮ್ಮ, ಜಗದೀಶ್, ಆರ್.ಬಾಬು, ತಿಮ್ಮೇಗೌಡ, ಒಕ್ಕಲಿಗೆ ಜಾಗೃತಿ ವೇದಿಕೆ ಜಿ.ಬಿ.ನವೀನ್ ಕುಮಾರ್, ಬೂದನೂರು ಸುನೀಲ್ ಈ ಸಂದರ್ಭದಲ್ಲಿ ಹಾಜರಿದ್ದರು.