ನವಲಗುಂದ: ತಾಲ್ಲೂಕಿನ ಕೆಲವೆಡೆ ಸಂಜೆ ಸುರಿದ ಭಾರೀ ಮಳೆಗೆ ಪಟ್ಟಣದ ಹೊರವಲಯದಲ್ಲಿ ಹರಿಯುವ ಅಂಬಲಿ ಹಳ್ಳ ಹಾಗೂ ಅಗಸನಹಳ್ಳ ಉಕ್ಕಿ ಹರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ನವಲಗುಂದ ಹಾಗೂ ಇಬ್ರಾಹಿಂಪುರ ಸಂಚಾರ ಕಡಿತಗೊಂಡಿದೆ.
ಹಳ್ಳದ ಪಕ್ಕದಲ್ಲೇ ಇದ್ದ ಶಾಲೆ ಮಕ್ಕಳು ಸಂಜೆ ಮನೆಯತ್ತ ಹೊರಡುವಾಗಲೇ ಉಕ್ಕಿದ ಹಳ್ಳದಿಂದಾಗಿ, ರಸ್ತೆಯಲ್ಲೇ ಕೆಲ ಕಾಲ ಕಳೆಯುವಂತಾಯಿತು. ಮಕ್ಕಳ ಜತೆಗೆ ಶಿಕ್ಷಕರೂ ಎತ್ತಲೂ ಸಾಗಲಾಗದೆ ನಿಂತಿದ್ದರು.
ಕೃಷಿ ಕೆಲಸಕ್ಕೆ ಹೋಗಿದ್ದ ರೈತರು ಎತ್ತು ಹಾಗೂ ಚಕ್ಕಡಿ ಸಮೇತ ರಸ್ತೆಯಲ್ಲೇ ನಿಂತರು. ರಸ್ತೆ ಮಟ್ಟಕ್ಕಿಂತ ಸೇತುವೆ ಕೆಳಗಿರುವುದರಿಂದ ಮಳೆ ಬಂದರೆ ಇಲ್ಲಿನ ಸಂಚಾರ ಕಡಿತಗೊಳ್ಳುವುದು ಸಾಮಾನ್ಯ. ಇದಕ್ಕೊಂದು ಮೇಲು ಸೇತುವೆ ನಿರ್ಮಿಸಿದರೆ ಈ ಸಮಸ್ಯೆ ಉದ್ಭವಿಸದು ಎಂದು ಸ್ಥಳೀಯರು ಹೇಳಿದರು.
ಸುಮಾರು ಎರಡು ಗಂಟೆಗಳ ನಂತರ ಮಕ್ಕಳನ್ನು ಟ್ರ್ಯಾಕ್ಟರ್ನಲ್ಲಿ ಹತ್ತಿಸಿಕೊಂಡ ಹರಿಯುವ ನೀರಿನಲ್ಲೇ ರಸ್ತೆ ದಾಟಿಸಿ ಗ್ರಾಮಸ್ಥರು ಮನೆಗೆ ಕರೆತಂದಿದ್ದಾರೆ.