ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಘಟಗಿ: ಉಳವಿ ಪಾದಯಾತ್ರಿಗಳಿಗೆ ದಾಸೋಹ

ಕಲ್ಲಪ್ಪ ಮ. ಮಿರ್ಜಿ
Published 18 ಫೆಬ್ರುವರಿ 2024, 4:05 IST
Last Updated 18 ಫೆಬ್ರುವರಿ 2024, 4:05 IST
ಅಕ್ಷರ ಗಾತ್ರ

ಕಲಘಟಗಿ: ಉಳವಿಯ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆಯಲ್ಲಿ ತೆರಳುವವರಿಗೆ ಪಟ್ಟಣದ ಹೊರವಲಯದ ತಡಸ ಕ್ರಾಸ್ ಹತ್ತಿರ ತಿಪ್ಪಣ್ಣ ಹಾಗೂ ಮಂಜುಳಾ ಕುರಗುಂದ ದಂಪತಿ ಪ್ರತಿ ವರ್ಷದಂತೆ ಈ ವರ್ಚವೂ ವಿಶ್ರಾಂತಿ ಮಂಟಪದಲ್ಲಿ ಅನ್ನ ದಾಸೋಹ ಹಮ್ಮಿಕೊಂಡಿದ್ದಾರೆ.

ಭಕ್ತರ ಸಹಕಾರದಿಂದ ಈ ದಂಪತಿ 14 ವರ್ಷಗಳಿಂದ ಉಳವಿಗೆ ಪಾದಯಾತ್ರೆ ತೆರಳುವ ಭಕ್ತರಿಗೆ ಬೆಳಗಿನ ಉಪಾಹಾರ, ಚಹಾ, ಮಧ್ಯಾಹ್ನದ ಊಟ, ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ದಾಸೋಹದ ಜೊತೆಗೆ ಶರಣರ ಕಾಯಕ ತತ್ವ ಸಿದ್ಧಾಂತ, ಶರಣರ ವಚನಗಳ ಸಂದೇಶ ನೀಡುವ ಮೂಲಕ ಜ್ಞಾನ ದಾಸೋಹ ಕೂಡ ನೀಡುವುದು ಇಲ್ಲಿನ ವಿಶೇಷ.

ತಿಪ್ಪಣ್ಣ ಅವರು ಕಲಾವಿದರು ಹೌದು. ತಾವೇ ತಯಾರಿಸಿದ ಉಳವಿ ಚನ್ನಬಸವೇಶ್ವರರ ಹಾಗೂ ಬಸವಣ್ಣನವರ ಮೂರ್ತಿಗಳು, ಚಿಕ್ಕದಾದ ದೇವಸ್ಥಾನ, ಎತ್ತುಗಳ ಚಕ್ಕಡಿಯನ್ನು ಮಂಟಪದಲ್ಲಿ ಇಟ್ಟಿದ್ದಾರೆ.

ಉಳವಿಯಲ್ಲಿ ಫೆ.24ರಂದು ಜಾತ್ರೆ ನಡೆಯಲಿದೆ. ಅಲ್ಲಿಯವರೆಗೂ, ಹುಬ್ಬಳ್ಳಿ–ಕಾರವಾರ ರಾಷ್ಟ್ರಿಯ ಹೆದ್ದಾರಿಯ ಪಕ್ಕದ ಗಣೇಶ ವರ್ಣೇಕರ ಅವರ ನಿವೇಶನದಲ್ಲಿ 15–20 ದಿನಗಳ ವರೆಗೆ ದಾಸೋಹ ಇರುತ್ತದೆ.

ವಿವಿಧ ಕಾರ್ಯಕ್ರಮಗಳು: ದಾಸೋಹ ಮಂಟಪದಲ್ಲಿ ಫೆ.23ರಂದು ರಾತ್ರಿ 9 ಗಂಟೆಗೆ ದಾಸ್ತಿಕೊಪ್ಪ ಗ್ರಾಮದ ಮಾರೆಮ್ಮ ಭಜನೆ ತಂಡದಿಂದ ಭಜನಾ ಜಾಗರಣೆ, 24ರಂದು ಬೆಳಿಗ್ಗೆ ಚನ್ನಬಸವಣ್ಣನವರ ಮಹಾಪೂಜೆ ನಂತರ ಹಿರೇಹೊನ್ನಿಹಳ್ಳಿ ಗ್ರಾಮದ ಲಿಂಗಾನುಭಾವಿ ಶರಣರ ಬಳಗದಿಂದ ಸಾಮೂಹಿಕ ಲಿಂಗ ಪೂಜೆ, ರಥೋತ್ಸವದ ಪೂಜೆ, ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ.

ಸಂಜೆ 4 ಗಂಟೆಗೆ ಸಂಗೆದೇವರಕೊಪ್ಪ ಗ್ರಾಮದ ಸಂಗಮೇಶ್ವರ ಕೋಲಾಟ ತಂಡ ಹಾಗೂ ವಾದ್ಯ ಮೇಳದೊಂದಿಗೆ ದಾಸೋಹ ಮಂಟಪದಿಂದ ಹನ್ನೆರಡು ಮಠದವರೆಗೆ ಚಿಕ್ಕ ರಥೋತ್ಸವ ಜರುಗುತ್ತದೆ. ಮನಗುಂಡಿ ಮಹಾಮನೆಯ ಬಸವಾನಂದ ಸ್ವಾಮೀಜಿ ಹಾಗೂ ಧಾರವಾಡದ ಅಕ್ಕಮಹಾದೇವಿ ಆಶ್ರಮದ ಜ್ಞಾನೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಭಕ್ತರ ಸಹಕಾರದಿಂದ ಪ್ರತಿ ವರ್ಷ ದಾಸೋಹ ನಡೆಸಿಕೊಂಡು ಹೋಗುತ್ತಿದ್ದೇವೆ. ಪಾದಯಾತ್ರೆ ಸಾಗುವ ಭಕ್ತರು ದಾಸೋಹ ಮಂಟಪಕ್ಕೆ ಭೇಟಿ ನೀಡಿ.
ಶರಣ ತಿಪ್ಪಣ್ಣ ಕುರಗುಂದ
ಕಲಘಟಗಿ ಪಟ್ಟಣದ ಹೊರವಲಯದ ತಡಸ ಕ್ರಾಸ್ ಬಳಿ ವಿಶ್ರಾಂತಿ ಮಂಟಪದಲ್ಲಿ ವಿವಿಧ ಕಲಾಕೃತಿಗಳೊಂದಿಗೆ ಶರಣ ತಿಪ್ಪಣ್ಣ ಕುರಗುಂದ ಇದ್ದಾರೆ
ಕಲಘಟಗಿ ಪಟ್ಟಣದ ಹೊರವಲಯದ ತಡಸ ಕ್ರಾಸ್ ಬಳಿ ವಿಶ್ರಾಂತಿ ಮಂಟಪದಲ್ಲಿ ವಿವಿಧ ಕಲಾಕೃತಿಗಳೊಂದಿಗೆ ಶರಣ ತಿಪ್ಪಣ್ಣ ಕುರಗುಂದ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT