ಧಾರವಾಡ: ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವುದನ್ನು ಖಂಡಿಸಿ ನಗರದ ಭೂಸಪ್ಪಚೌಕ ಬಡಾವಣೆಯ ನಿವಾಸಿಗಳು ರಸ್ತೆ ತಡೆ ನಡೆಸಿ ಬುಧವಾರ ಧರಣಿ ನಡೆಸಿದರು.
ಎರಡು ಗಂಟೆ ಕಾಲ ರಸ್ತೆ ತಡೆ ನಡೆಸಿದ ನಿವಾಸಿಗಳು, ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಇದ್ದ ಚರಂಡಿಗಳನ್ನು ಸಣ್ಣದಾಗಿ ನಿರ್ಮಿಸಿದ್ದಾರೆ. ಇದರಿಂದ ರಸ್ತೆಯಲ್ಲಿ ಹಾಗೂ ಚರಂಡಿಯಲ್ಲಿ ಹರಿಯುವ ನೀರು ಮನೆಗಳಿಗೆ ಹಾಗೂ ಅಂಗಡಿಗಳಿಗೆ ನುಗ್ಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಚರಂಡಿ ನೀರು ನುಗ್ಗುತ್ತಿರುವುದರಿಂದ ಅಂಗಡಿಗಳನ್ನು ಮುಚ್ಚಲಾಗಿದೆ. ಹೀಗಾಗಿ ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸಿದ್ದಾರೆ.ಅಲ್ಲದೇ ಬಡಾವಣೆಯು ಮಾರುಕಟ್ಟೆ ಪ್ರದೇಶಕ್ಕೆ ಹತ್ತಿರ ಇರುವುದರಿಂದ ಬಹುತೇಕ ನಿವಾಸಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಇದೀಗ ಈ ಮಾರ್ಗದಲ್ಲಿ ಸಂಚರಿಸುವವರು ಚರಂಡಿ ನೀರಿನಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಬಡಾವಣೆ ಸುತ್ತಮುತ್ತ ಖಸಾಯಿಖಾನೆಗಳಿವೆ. ಅಲ್ಲಿನ ಕಸವೆಲ್ಲ ಚರಂಡಿಯಲ್ಲಿ ಹರಿದು ಬರುತ್ತದೆ. ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ರೋಗ ಹರಡುವ ಭೀತಿಯೂ ಎದುರಾಗಿದೆ. ಹೀಗಾಗಿ ಈ ಕುರಿತು ಮಹಾನಗರ ಪಾಲಿಕೆ ಕೂಡಲೇ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದರು.
ಧರಣಿಯಲ್ಲಿ ಬಸವರಾಜ ಕಟಗಿ, ರಾಕೇಶ ನಾಝರೆ, ಗಣೇಶ ಪಾಟೀಲ, ಶಂಭು ಸಾಲಿಮನಿ, ತಿಪ್ಪಣ್ಣ ಕಟ್ಟಮನಿ, ಓಂಕಾರ ರಾಯಚೂರ ಹಾಗೂ ನಿವಾಸಿಗಳು ಇದ್ದರು.