ಕಲಘಟಗಿ: ತಾಲ್ಲೂಕಿನ ರೈತರ ಜಾನುವಾರಗಳಿಗೆ ಮೂರನೇ ಸುತ್ತಿನ ಕಾಲು–ಬಾಯಿ ಬೇನೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಶಾಸಕ ಸಿ.ಎಂ.ನಿಂಬಣ್ಣವರ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಜಾನುವಾರಗಳನ್ನು ರೋಗದಿಂದ ರಕ್ಷಿಸಲು ಸರ್ಕಾರ ಪಶು ಸಂಗೋಪನ ಇಲಾಖೆ ಮೂಲಕ ಲಸಿಕೆ ನೀಡುತ್ತಿದ್ದು, ಎಲ್ಲ ರೈತರು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು’ ಎಂದು ಕೋರಿದರು.
ಹಸುಗಳಿಗೆ ಗೋ ಪೂಜೆ, ಇಲಾಖೆಯ ಜಾನುವಾರಗಳ ಲಸಿಕಾ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ತಾಲ್ಲೂಕು ಪಶು ಆಸ್ಪತ್ರೆ ವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಮಾತನಾಡಿ, ‘ತಾಲ್ಲೂಕಿನಲ್ಲಿ ಮೂರನೇ ಸುತ್ತಿನ ಕಾಲುಬಾಯಿ ಲಸಿಕೆ ಅಭಿಯಾನ ಸೋಮವಾರದಿಂದ ಡಿಸೆಂಬರ್ 7ರ ವರೆಗೆ ನಡೆಯಲಿದೆ. ರೈತರ 4 ತಿಂಗಳ ಮೇಲ್ಪಟ್ಟ ಕರು ಹಾಗೂ ಹಸುಗಳಿಗೆ ಲಸಿಕೆ ನೀಡಲಾಗುವುದು’ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯ ಗಂಗಾಧರ ಗೌಳಿ, ಎಂ.ಎನ್.ಘಂಟೆ, ಧರೇಶ ಗಾಣಿಗೇರ, ಎಂ.ವೈ. ಮಡಿವಾಳರ, ಶರಣಬಸಪ್ಪ ಬದಾಮಿ ಇದ್ದರು.
ಮಾಹಿತಿಗೆ ಸಹಾಯವಾಣಿ-8277100200 ಸಂಪರ್ಕಿಸಲು ಕೋರಲಾಗಿದೆ.