ಹುಬ್ಬಳ್ಳಿ: ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶನಿವಾರ ವಿಶೇಷ ಪೂಜೆ, ಪ್ರಾರ್ಥನೆ, ಅಲಂಕಾರ ಶ್ರದ್ಧಾ–ಭಕ್ತಿಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ದೇಗುಲಗಳಿಗೆ ಭೇಟಿ ನೀಡಿದ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ವಿಶೇಷವಾಗಿ ಅಲಂಕೃತಗೊಂಡಿದ್ದ ದೇವರ ಮೂರ್ತಿಗಳನ್ನು ಕಣ್ತುಂಬಿಕೊಂಡರು. ವಿವಿಧ ಸಂಘಟನೆಗಳು ಭಕ್ತರಿಗೆ ಫಲಾಹಾರ ವಿತರಿಸುವ ಮೂಲಕ ಭಕ್ತಿ ಸೇವೆ ಸಲ್ಲಿಸಿದವು.
ಹುಬ್ಬಳ್ಳಿಯ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶೇಷಶಯನ ವಿಷ್ಣು ಮೂರ್ತಿಗೆ ಪೂಜೆ ನೆರವೇರಿಸಲಾಯಿತು
ಅರವಿಂದನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶೇಷಶಯನ ವಿಷ್ಣು ಮೂರ್ತಿ ಗಮನ ಸೆಳೆಯಿತು. ದೇವಸ್ಥಾನ ಸಮಿತಿಯವರು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವ ಮೂಡಿಸಿದವು. ಏಕಾದಶಿ ಅಂಗವಾಗಿ ಹಲವರು ಉಪಾವಾಸ ವ್ರತ ಆಚರಿಸಿದರು.
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು
ರಾಯಾಪುರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ನಸುಕಿನ ಜಾವ 4.30ಕ್ಕೆ ಶ್ರೀಕೃಷ್ಣ ಬಲರಾಮರ ಮೂರ್ತಿಗಳಿಗೆ ಮಹಾ ಮಂಗಳಾರತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಶ್ರೀಕೃಷ್ಣನ ಮೂರ್ತಿಗೆ ವೈಕುಂಠ ನಾರಾಯಣನ ಅಲಂಕಾರ ಮಾಡಲಾಗಿತ್ತು. ಭಕ್ತರು ಭಜನೆ ಹಾಗೂ ಕಿರ್ತನೆಗಳ ಹಾಡಿ ಶ್ರೀಕೃಷ್ಣನನ್ನು ಸ್ಮರಿಸಿದರು.
ಮಂದಿರದ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿದ್ದ 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ಸ್ವರ್ಣ ವರ್ಣದ ವೈಕುಂಠ ದ್ವಾರ ಗಮನ ಸೆಳೆಯಿತು.
ಹಳೇಹುಬ್ಬಳ್ಳಿ ಅರವಿಂದ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶೇಷಶಯನ ವಿಷ್ಣುವಿನ ಮೂರ್ತಿಗೆ ಭಕ್ತರು ನಮಿಸಿದರು
ಇಸ್ಕಾನ್ ಹುಬ್ಬಳ್ಳಿ-ಧಾರವಾಡದ ಅಧ್ಯಕ್ಷ ರಾಜೀವ್ ಲೋಚನದಾಸ, ಉದ್ಯಮಿ ವಿ.ಎಸ್.ವಿ.ಪ್ರಸಾದ, ಶ್ರೀನಿವಾಸ ಹಾಗೂ ಸತೀಶ್ ಶೆಟ್ಟಿ, ಗೋವಿಂದರಾಜ ಪೆರುಮಾಳ ಉಪಸ್ಥಿತಿಯಲ್ಲಿ ದ್ವಾರವನ್ನು ತೆರೆಯಲಾಯಿತು. ಭಗವಂತನ ಒಂದು ಲಕ್ಷ ನಾಮಗಳ ಜಪದ ಸೇವೆ ಜರುಗಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಹುಬ್ಬಳ್ಳಿಯ ಗೌಳಿಗಲ್ಲಿಯ ಭೂವರಹ ಮತ್ತು ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು