ಹುಬ್ಬಳ್ಳಿ: ನಗರದ ಈದ್ಗಾ ಮೈದಾನದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಪೆಂಡಾಲ್ ನ ದ್ವಾರದ ಅಕ್ಕಪಕ್ಕದಲ್ಲಿ ಹಾಕಿದ್ದ ವಿ.ಡಿ. ಸಾವರ್ಕರ್, ಶಿವಾಜಿ ಹಾಗೂ ಭಗತ್ ಸಿಂಗ್ ಭಾವಚಿತ್ರಗಳ ಫ್ಲೆಕ್ಸ್ ಅನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.
ಗಣೇಶೋತ್ಸವಕ್ಕೆ ಪಾಲಿಕೆ ನೀಡಿದ್ದ ಷರತ್ತುಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಸಿಬ್ಬಂದಿ ತೆರವು ಮಾಡಿದರು. ಆದರೆ, ಗಣೇಶ ಮೂರ್ತಿ ಹಿಂಭಾಗ ಅಳವಡಿಸಿರುವ ಮಹಾಮಂಡಳಿ ಹೆಸರನ್ನೊಳಗೊಂಡ ಫ್ಲೆಕ್ಸ್ ನಲ್ಲಿ ಬಾಲಗಂಗಾಧರ ತಿಲಕ್ ಮತ್ತು ಸಾವರ್ಕರ್ ಅವರ ಭಾವಚಿತ್ರ ಹಾಗೆಯೇ ಇತ್ತು.
ಸಂಜೆ ನಡೆದ ಮಹಾ ಮಂಗಳಾರತಿಯಲ್ಲಿ ಭಾಗವಹಿಸಿದ್ದ ಪಾಲಿಕೆ ಸದಸ್ಯರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರಿಗೆ ಸಾವರ್ಕರ್ ಭಾವಚಿತ್ರ ನೀಡಿ ಗೌರವಿಸಲಾಯಿತು.
ಷರತ್ತಿನಲ್ಲಿ ಏನಿದೆ?: ಪಾಲಿಕೆ ವಿಧಿಸಿರುವ ಒಂಬತ್ತು ಷರತ್ತುಗಳಲ್ಲಿ ಪೆಂಡಾಲ್ ನಲ್ಲಿ ಗಣೇಶ ಮೂರ್ತಿ ಹೊರತುಪಡಿಸಿ ಬೇರಾವುದೇ ಮೂರ್ತಿ ಹಾಗೂ ಬ್ಯಾನರ್, ಫ್ಲೆಕ್ಸ್, ಭಾವಚಿತ್ರ ಹಾಗೂ ಜಾಹೀರಾತು ಹಾಕುವಂತಿಲ್ಲ.