ಅಳ್ನಾವರ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ ಅವರು ಸತತ ಐದು ಬಾರಿ ಲೋಕಸಭಾ ಸದಸ್ಯರಾಗಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಜೋಶಿ ಅವರ ಅಭಿಮಾನಿಗಳು ಪಟ್ಟಣದ ಆನಂದ ಭವನದ ವೃತ್ತದ ಬಳಿ ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಎಂ.ಎಸ್.ಐ.ಎಲ್ ಮಾಜಿ ನಿರ್ದೇಶಕ ಶಿವಾಜಿ ಡೊಳ್ಳಿನ ಮಾತನಾಡಿ, ಪ್ರಹ್ಲಾದ ಜೋಶಿ ಅವರ ಅಧಿಕಾರ ಅವಧಿಯಲ್ಲಿ ಧಾರವಾಡ ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಅಳ್ನಾವರ ರೈಲು ನಿಲ್ದಾಣವನ್ನು ₹ 17 ಕೋಟಿ ವೆಚ್ಚದಲ್ಲಿ ಮೇಲ್ದರ್ಜೇಗೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರತಿ ಹಳ್ಳಿಗೂ ಶುದ್ದ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಬಣ್ಣ ದರ್ಪಣೆ ಕಾರ್ಯಕ್ರಮದಡಿ ನೂರಾರು ಶಾಲೆಗಳಿಗೆ ಬಣ್ಣ, ಡೆಸ್ಕ್, ಕೊಠಡಿ ನಿರ್ಮಾಣ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ. ಇದು ಅವರ ಗೆಲುವಿಗೆ ಕಾರಣವಾಗಿದೆ ಎಂದರು.
ಮಹಿಳೆಯರ ಸ್ವಾವಲಂಬನೆ ಉದ್ದೇಶದಿಂದ ಉಚಿತ ಹೊಲಿಗೆ ತರಬೇತಿ ನೀಡುವುದರ ಜೊತೆಗೆ ಉಚಿತ ಹೊಲಿಗೆ ಯಂತ್ರ ವಿತರಿಸಿರುವುದು ಸಹ ಜೋಶಿಯವರ ಕಾರ್ಯಗಳಲ್ಲಿ ಒಂದಾಗಿದೆ ಎಂದರು.