ಗುಡಗೇರಿ: ಮಹಿಳೆಯರು ಈಗ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಶಾರದಾ ಕೆ. ನಡುವಿನಮನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗುಡಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಇದು ಮಹಿಳೆಯರ ಶಕ್ತಿಗೆ ಸಾಕ್ಷಿಯಾಗಿದ್ದು, ಮಹಿಳೆಗೆ ರಾಜಕೀಯವಾಗಿಯೂ ಇನ್ನಷ್ಟು ಆದ್ಯತೆ ಸಿಗಬೇಕು’ ಎಂದರು.
ಗ್ರಾಮಪಂಚಾಯತಿ ಅಭಿವೃದ್ದಿ ಅಧಿಕಾರಿ ಎ.ಕೆ ಧರ್ಮಣ್ಣ ಮಾತನಾಡಿ ‘ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು. ಸದಸ್ಯರಾದ ಸುಜಾತಾ ದ್ಯಾಪಾಯಿ, ಸುಶೀಲವ್ವ ಹೆಗ್ಗಣ್ಣವರ, ದ್ರಾಕ್ಷಾಯಣಿ ಶಿರೂರ, ಗಂಗವ್ವ ಕರೆಗಾರ, ಕವಿತಾ ತಡಸದ, ರೇಖಾ ಗೋವಿಂದಪ್ಪನವರ ಅನೇಕರಿದ್ದರು.