ಹುಬ್ಬಳ್ಳಿ: ಬಿ. ಶುಭಂರ ಆಲ್ರೌಂಡ್ ಆಟದಿಂದಾಗಿ ಬೆಳಗಾವಿಯ ಗೋಗಟೆ ಕಾಲೇಜು ತಂಡವು ಇಲ್ಲಿನ ನೆಹರು ಮೈದಾನದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಮಟ್ಟದ `ಆಕ್ಸ್ಫರ್ಡ್ ಟಿ-20' ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಬಾಗಲಕೋಟೆಯ ಬಸವವೇಶ್ವರ ಕಾಲೇಜು ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬಸವೇಶ್ವರ ಕಾಲೇಜು ಪರ ಎಚ್. ಸಿದ್ದು ಐದು ಬೌಂಡರಿ ಸಹಿತ 30 ರನ್ ಗಳಿಸುವ ಮೂಲಕ ಉತ್ತಮ ಸ್ಕೋರ್ ಕಲೆಹಾಕುವ ಭರವಸೆ ಮೂಡಿಸಿದರು. ಎಸ್. ಮಣಿಕಂಠ ಸಹ 23 ರನ್ ಗಳಿಕೆ ಮೂಲಕ ಸಾಥ್ ನೀಡಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳಿಂದ ಉತ್ತಮ ಆಟ ಬರಲಿಲ್ಲ. ಅಂತಿಮವಾಗಿ ತಂಡ 6 ವಿಕೆಟ್ಗೆ 95 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೋಗಟೆ ಕಾಲೇಜು ತಂಡ ಕೇವಲ 9.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮಜೀದ್ 21, ಬಿ. ಶುಭಂ ನಾಲ್ಕು ಬೌಂಡರಿ, ಒಂದು ಸಿಕ್ಸರ್, 26 ರನ್ ಗಳಿಸಿ ಅಜೇಯರಾಗಿ ಉಳಿದರು.
ಪ್ರಿಯದರ್ಶಿನಿ ಕಾಲೇಜು ಕ್ವಾರ್ಟರ್ಫೈನಲ್ಗೆ: ಮತ್ತೊಂದು ಪಂದ್ಯದಲ್ಲಿ ಹುಬ್ಬಳ್ಳಿಯ ಎಚ್.ಪಿ. ಪಿ.ಯು. ಕಾಲೇಜು ವಿರುದ್ಧ ವಾಕ್ ಓವರ್ ಪಡೆದ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೇಜು ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆಯಿತು.
ಸಂಕ್ಷಿಪ್ತ ಸ್ಕೋರ್
ಬಸವೇಶ್ವರ ಕಾಲೇಜು, ಬಾಗಲಕೋಟೆ: 20 ಓವರ್ಗಳಲ್ಲಿ 6 ವಿಕೆಟ್ಗೆ 95 (ಎಚ್. ಸಿದ್ದು 30, ಎಸ್. ಮಣಿಕಾಂತ್ 23. ಬಿ. ಶುಭಂ 18ಕ್ಕೆ 2. ಕೆ. ಜಯದೇವ್ 19ಕ್ಕೆ 2)
ಗೋಗಟೆ ಕಾಲೇಜು, ಬೆಳಗಾವಿ: 9.3 ಓವರ್ಗಳಲ್ಲಿ 2 ವಿಕೆಟ್ಗೆ 101 (ಬಿ. ಶುಭಂ ಔಟಾಗದೇ 26, ಎಂ. ಮಜೀದ್ ಔಟಾಗದೇ 21, ದರ್ಶನ್ ಪಾಟೀಲ್ 23. ಶ್ರೀಶೈಲ್ 7ಕ್ಕೆ 1)
ಪಂದ್ಯ ಪುರುಷ: ಬಿ. ಶುಭಂ