ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಜಾಗಗಳಲ್ಲಿ ಬಯಲು ಬಾರುಗಳು!

Last Updated 10 ಡಿಸೆಂಬರ್ 2016, 10:13 IST
ಅಕ್ಷರ ಗಾತ್ರ

‘ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು/
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು’

ಇದು ಕವಿ ಬಿ.ಆರ್‌. ಲಕ್ಷ್ಮಣರಾವ್‌ ಅವರ  ಕವನವೊಂದರ ಆರಂಭದ ಎರಡು ಸಾಲುಗಳು. ಧಾರವಾಡದಲ್ಲಿ ಬಾರುಗಳಿವೆಯೇ ಹೊರತು ಜಾಲಿ ಬಾರುಗಳು ಇಲ್ಲದಿರಬಹುದು. ಇಲ್ಲಿನ ಪ್ರತಿಯೊಂದು ಗೆಳೆಯರ ಗುಂಪಿನಲ್ಲೂ ಕಾಲು ಎಳೆಯಲು ಒಬ್ಬ ‘ಗೋಪಿ’ಯಂತೂ ಇದ್ದೇ ಇರುತ್ತಾನೆ. ಆದರೆ ಹೀಗೆ ಗೆಳೆಯನೊಬ್ಬನ ಕಾಲು ಎಳೆಯುತ್ತಾ ಸುಂದರ ಸಂಜೆ ಕಳೆಯಲು ಖಾಲಿ ಜಾಗಗಳನ್ನೇ ಜನರು ಜಾಲಿ ಬಾರುಗಳನ್ನಾಗಿ ಮಾಡಿಕೊಂಡಿದ್ದಾರೆ.

ಧಾರವಾಡದಲ್ಲಿ ಬಹಳಷ್ಟು ಖಾಲಿ ಜಾಗಗಳಿವೆ. ಹೆಚ್ಚಿನವು ಸರ್ಕಾರಿ ಜಾಗಗಳಾದರೆ, ಉಳಿದ ಕೆಲವು ಖಾಸಗಿ ಜಾಗಗಳು, ನಗರಕ್ಕೆ ಹೊಂದಿಕೊಂಡಿರುವ ಕೆಲವು ಮಾವಿನ ತೋಪುಗಳು, ಮೈದಾನಗಳು, ಶಿಕ್ಷಣ ಸಂಸ್ಥೆಗಳ ಆವರಣಗಳು, ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳು, ಎಲ್ಲಕ್ಕೂ ಮಿಗಿಲಾಗಿ ಸುಂದರ ಕೆರೆಗಳೇ ಬಾರುಗಳಾಗಿ ಪರಿವರ್ತನೆಗೊಂಡಿವೆ.

ಇನ್ನೂ ಅಚ್ಚರಿ ಎಂದರೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿರುವ ಆವರಣದಲ್ಲೇ ಮದ್ಯದ ಬಾಟಲಿಗಳು ಸಿಗುತ್ತವೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ತಿಂಗಳ ಹಿಂದೆ ಅಂಚೆ ಇಲಾಖೆಯ ನೌಕರರು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶುಚಿಗೊಳಿಸುವಾಗ ನೂರಾರು ಮದ್ಯದ ಬಾಟಲಿಗಳು ದೊರೆತ ಉದಾಹರಣೆ ಇದೆ.

ವೈನ್‌ಶಾಪ್‌ಗೆ ಹೋಗಿ ಮದ್ಯ ಖರೀದಿಸಿದರೆ ಉದಾಹರಣೆಗೆ `1000 ಎಂದುಕೊಂಡರೆ, ಬಾರ್‌ಗಳಲ್ಲಿ ಇಷ್ಟೇ ಪ್ರಮಾಣಕ್ಕೆ `1500ರವರೆಗೂ ಪಾವತಿಸಬೇಕು. ನಗರ ವ್ಯಾಪ್ತಿಯಾದರೆ ಶೇ 5.5ರಷ್ಟು ಹೆಚ್ಚುವರಿ ತೆರಿಗೆಯನ್ನೂ ಗ್ರಾಹಕರೇ ಕಟ್ಟಬೇಕು. ಇಂಥ ಹೆಚ್ಚುವರಿ ಖರ್ಚುಗಳನ್ನು ತಡೆಗಟ್ಟಲು ಈ ‘ಬಯಲು ಬಾರು’ಗಳ ಸಂಖ್ಯೆ ಹೆಚ್ಚಾಗಿವೆ.

ಇಲ್ಲಿ ಆಪ್ತತೆಯೂ ಇರುತ್ತದೆ. ಗುಪ್ತವಾದ ಯಾವುದೇ ಚರ್ಚೆಗಳನ್ನೂ ಮಾಡಬಹುದು, ಕಾರಿನಲ್ಲಿ ಹೋಗಿದ್ದರೆ ಜೋರಾಗಿ ಸಂಗೀತ ಹಾಕಿಕೊಂಡು ನರ್ತನವನ್ನೂ ಮಾಡಬಹುದು. ಯಾರ ಭಯವೂ ಇಲ್ಲ, ಯಾರ ಹಂಗೂ ಇಲ್ಲ. ಹೀಗಾಗಿ ಧಾರವಾಡದಲ್ಲಿ ಒಂದೊಂದು ಸ್ನೇಹಿತರ ಗುಂಪು ಒಂದೊಂದು ಆಯಕಟ್ಟಿನ ‘ಬಯಲು ಬಾರು’ಗಳನ್ನು ಆಯ್ಕೆ ಮಾಡಿಕೊಂಡಿರುವುದು ಇದೆ.

ಇಂಥ ಸ್ಥಳಗಳಲ್ಲಿ ರಾತ್ರಿ ಪಾರ್ಟಿ ನಡೆದಿದೆ ಎಂಬುದು ಮೊದಲು ತಿಳಿಯುವುದು ಮುಂಜಾನೆಯ ವಾಯುವಿಹಾರಕ್ಕೆ ಬರುವವರಿಗೇ! ಕಪ್ಪು ಬಣ್ಣದ ಖಾಲಿ ಪ್ಲಾಸ್ಟಿಕ್ ಕವರ್‌, ಬಗೆಬಗೆಯ ಬ್ರಾಂಡ್‌ಗಳ ಮದ್ಯದ ಬಾಟಲಿ ಅಥವಾ ಬಿಯರ್‌ ಬಾಟಲಿಗಳು ಹಾಗೂ ಬಾಕ್ಸ್‌, ಒಂದಷ್ಟು ಪ್ಲಾಸ್ಟಿಕ್‌ ಕಪ್‌ಗಳು, ರಾತ್ರಿಯ ಕತ್ತಲಲ್ಲಿ ಕಣ್ಣಿಗೆ ಕಾಣದೆ ಕೈಯಿಂದ ಜಾರಿದ ಒಂದಷ್ಟು ಶೇಂಗಾ ಬೀಜಗಳು ಹಿಂದಿನ ರಾತ್ರಿಯ ಜಾಲಿ ಪಾರ್ಟಿಯ ಕುರುಹುಗಳನ್ನು ತೋರುತ್ತವೆ.
ಮೇಲಿನ ಕವನದ ಸಾಲಿನ ಮುಂದುವರಿದ ಭಾಗದಂತೆ.

'ಗುಂಡು ಹಾಕೊ ಗೋಪಿ'/
'ನಂಗ್ ಸಾಕಪ್ಪ ಕಾಫಿ'/
'ಚಿಕ್ಕನ್ ಬಿರಿಯಾನೀ'/
'ಏಕ್ ಲೋಟ ಥಂಡಾ ಪಾನಿ'/


ಯಂತೆ ಇಲ್ಲಿ ಆರಂಭದಲ್ಲಿ ಮದ್ಯ ಹಂಚಿಕೊಳ್ಳುವ ಸಪ್ಪಳವೇ ಹೆಚ್ಚು. ಊರ ತುಂಬಾ ಇರುವ ಸಾವಜಿ ಖಾನಾವಳಿಯಲ್ಲಿ ತಮ್ಮಿಷ್ಟದ ಕಬಾಬ್‌, ಕೀಮಾ, ಬಿರಿಯಾನಿ, ಖಡಕ್‌ ರೊಟ್ಟಿ, ಶೇರ್ವಾ ಜತೆಗೆ ನೀರು ತೆಗೆದುಕೊಂಡು ಹೋಗಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದೇ ಇಲ್ಲಿನ ವಿಶೇಷ. ಒಳಗೆ ಗುಂಡು ಸೇರಿದ ನಂತರ ತುಂಡು ಕಡಿದು ನಂತರ ನೃತ್ಯ ಇಲ್ಲವೇ ಜಗಳ ಎರಡರಲ್ಲಿ ಒಂದು ಕಾಯಂ.

ಇತ್ತೀಚೆಗೆ ಆಟೋ ಚಾಲಕನೊಬ್ಬನ ಕೊಲೆಯೂ ಹೀಗೆ ನಗರದ ಹೊರವಲಯದ ಕೆಲಗೇರಿ ಬಳಿಯ ಹೊಲ ಒಂದರಲ್ಲಿ ನಡೆದಿತ್ತು. ಅಲ್ಲಿಯೂ ಇದೇ ರೀತಿಯಲ್ಲಿ ಸ್ನೇಹಿತರು ಜತೆಗೂಡಿ ಹೊಲದಲ್ಲಿ ಮದ್ಯ ಸೇವಿಸಿ ಮುಂದೆ, ಸ್ನೇಹಿತನನ್ನೇ ಕೊಲೆ ಮಾಡಿದ್ದರು.

ಇನ್ನು ಕೆಲವು ಕಡೆ ಮೈದಾನ ಅಥವಾ ಖಾಲಿ ನಿವೇಶನಗಳಲ್ಲಿ ಕಾರಿನಲ್ಲಿ ಬಂದು ಮದ್ಯ ಸೇವಿಸಿ, ನಂತರ ಅದನ್ನು ಅಲ್ಲೇ ಒಡೆದು ಗಾಜಿನ ಚೂರುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ ಹೋಗುವ ವಿಕೃತ ಮನಸ್ಸಿನವರೂ ಇದ್ದಾರೆ. ಈ ಕುರಿತು ಹಲವು ಬಾರಿ ಬಡಾವಣೆಯ ಮಹಿಳೆಯರು ಠಾಣೆಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದೂ ಇದೆ.

ಇನ್ನೂ ಕೆಲವೆಡೆ ಬಯಲು ಪಾರ್ಟಿ ಮುಗಿದ ನಂತರ ಬಾಟಲಿಗಳನ್ನು ಕವರ್‌ಗೆ ಹಾಕಿಕೊಂಡು ಕಸದ ಡಬ್ಬಕ್ಕೆ ಎಸೆದು ಮನೆ ಸೇರುವ ಸಭ್ಯ ಮದ್ಯಪ್ರಿಯರೂ ಇದ್ದಾರೆ.

ಅಗ್ಗದ ಮದ್ಯವೂ, ಬಯಲು ಬಾರೂ...
ಧಾರವಾಡಕ್ಕೆ ಅತಿ ಸಮೀಪದ ನೆರೆಯ ರಾಜ್ಯಗಳೆಂದರೆ ಗೋವಾ ಹಾಗೂ ಮಹಾರಾಷ್ಟ್ರ. ಮದ್ಯದ ವಿಷಯದಲ್ಲಿ ಗೋವಾಗೆ ಹೋಗುವವರೇ ಹೆಚ್ಚು. ಒಬ್ಬರು ಗೋವಾಗೆ ಹೋದರೆ, ಬರಿಗೈಯಲ್ಲಿ ಮರಳುವುದು ತೀರಾ ವಿರಳ.

ಸ್ನೇಹಿತನೊಬ್ಬ ಗೋವಾದಿಂದ ಬಂದಿದ್ದಾನೆ ಎಂದರೆ ಆ ಗುಂಪಿನ ಇತರರರಿಗೆ ಇಂಥ ಬಯಲು ಪಾರ್ಟಿಯ ಪೋಲಿ ಬಾರುಗಳಿಗೆ ಚಾಲನೆ ದೊರೆತ ಸೂಚನೆಯಂತೆಯೇ.

ಗೋವಾಗಿಂತ ಇಲ್ಲಿ ಮೂರೂವರೆಯಿಂದ ನಾಲ್ಕು ಪಟ್ಟು ದುಬಾರಿ ಬೆಲೆಯಾದ್ದರಿಂದ ಅದರ ಬಳಕೆಯೇ ಹೆಚ್ಚು. ಜತೆಗೆ ಹೊರಗಿನಿಂದ ಬಾಟಲಿ ತಂದವರಿಗೆ ಬಾರುಗಳಲ್ಲಿ ಪ್ರವೇಶವಿಲ್ಲ. ಹೀಗಾಗಿ ಅನಿವಾರ್ಯ­ವಾಗಿ ಮತ್ತು ಹೆಚ್ಚು ಖುಷಿಯಿಂದ ಇಂಥ ಬಯಲು ಬಾರುಗಳನ್ನೇ ಹಲವರು ನೆಚ್ಚಿಕೊಂಡಿದ್ದಾರೆ.

ಧಾರವಾಡದಲ್ಲಿ ಈಗ ಮಾಗಿ ಚಳಿಯ ಕಾಲ. ಬಯಲಿನಲ್ಲಿ ಬೀಸುತ್ತಿರುವ ತಣ್ಣನೆಯ ಹವೆಗೆ ಮೈಬಿಸಿ ಏರಿಸಲು ಇಂಥ ಬಯಲು ಜಾಲಿ ಬಾರುಗಳನ್ನು ನೆಚ್ಚಿಕೊಂಡಿರುವವರ ಸಂಖ್ಯೆ ಏರುಮುಖವಾಗಿದೆ. ಒಂದೆಡೆ ಮದ್ಯದ ಅಮಲಿನಲ್ಲಿ ಅಪಘಾತಕ್ಕೀಡಾಗುವ ಅಪಾಯವಾದರೆ, ಕುಡಿದ ಅಮಲಿನಲ್ಲಿ ಬೇರೆಯವರಿಗೆ ತೊಂದರೆಯಾಗುವ ಅನಾಹುತ­ಗಳನ್ನೂ ತಳ್ಳಿಹಾಕುವಂತಿಲ್ಲ.

ಬಯಲು ಪೋಲಿ ಬಾರುಗಳು ಯಾರ ವ್ಯಾಪ್ತಿಗೆ ಒಳಪಡುತ್ತವೆ?
ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಅವರು ಪ್ರತಿಕ್ರಿಯಿಸಿ, ‘ಜನರು ಬಿಡಿ ಮದ್ಯ ತಂದು ಕುಡಿಯುತ್ತಿದ್ದಾರೆ ಎಂದರೆ ಅದು ಅಬಕಾರಿ ಇಲಾಖೆಯವರು ದಾಳಿ ಮಾಡಬೇಕು. ನಮಗೆ ಇರುವ ಕೆಲಸವೇ ಹೆಚ್ಚು. ಅವರ ಕೆಲಸವನ್ನೂ ನಾವೇ ಮಾಡುವುದು ಕಷ್ಟವಾದೀತು. ಆದರೂ ಇಂದಿನಿಂದಲೇ ಗಸ್ತು ತಿರುಗಲು ಸಂಬಂಧಪಟ್ಟ ಠಾಣೆಗೆ ಸೂಚಿಸುತ್ತೇನೆ’ ಎಂದರು.

ಅಬಕಾರಿ ಇಲಾಖೆ ಅಧಿಕಾರಿ ಕ್ಯಾತಣ್ಣವರ ಪ್ರತಿಕ್ರಿಯಿಸಿ, ‘ಒಬ್ಬ ವ್ಯಕ್ತಿ 2.3 ಲೀಟರ್‌ ಮದ್ಯ ಕೊಂಡೊಯ್ಯಬಹುದು. ಮದ್ಯಪಾನಿಗಳಿಗೆ ಮದ್ಯದ ಅಂಗಡಿಯೊಳಗೆ ಕುಳಿತು ಕುಡಿಯಿರಿ ಎಂದು ನಾವು ಹೇಳಬಹುದು. ಆದರೆ ಅವರ ಮೇಲೆ ಅದನ್ನು ಹೇರುವಂತಿಲ್ಲ. ಇದು ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ಪೊಲೀಸ್‌ ಇಲಾಖೆಗೆ ಸೇರಿದ್ದು’ ಎಂದರು.

‘ಡಜನ್‌ಗಟ್ಟಲೆ ಮದ್ಯ ಹೊಂದಿದ್ದು ಬಯಲಿನಲ್ಲಿ ಪಾರ್ಟಿ ಮಾಡುತ್ತಿದ್ದರೆ ಅಥವಾ ಮನೆಯೊಳಗೆ ಮದ್ಯ ಮಾರಾಟ ಮಾಡಿ ಕುಡಿಯಲು ಅವಕಾಶ ನೀಡಿದರೆ ಅಂಥ ಕಡೆಗಳಲ್ಲಿ ಅಬಕಾರಿ ಇಲಾಖೆ ದಾಳಿ ಮಾಡಲು ಅವಕಾಶವಿದೆ. ನಾವು ರೂಲ್‌ 32 ಬಿಟ್ಟು ಕೆಲಸ ಮಾಡುವಂತಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT