ಹುಬ್ಬಳ್ಳಿ: `ರಸ್ತೆಯೇ ಇಲ್ಲದ ಬಡಾವಣೆ ನಮ್ಮದು. ಮಳೆ ಬಂದರಂತೂ ಊರಿಡೀ ರಾಡಿ ಎದ್ದು ನಡೆದಾಡುವುದೇ ಕಷ್ಟ. ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸಂಕಷ್ಟವನ್ನು ಇಲ್ಲಿಗೆ ಬಂದು ನೋಡಿದರಷ್ಟೇ ಗೊತ್ತಾದೀತು.
ನಮಗೊಂದು ರಸ್ತೆ ನಿರ್ಮಿಸಿಕೊಡಿ~ ಎಂದು ಮಂಟೂರ ರಸ್ತೆಯ ಕೆ. ಬರ್ನಾಬಸ್ ನಗರದ ನಿವಾಸಿಗಳು ಮುಖ್ಯಮಂತ್ರಿ ಜಗದೀಶ ಶೆಟ್ಟರ್ಗೆ ಅಹವಾಲು ಸಲ್ಲಿಸಿದ್ದಾರೆ.
ಪಾಲಿಕೆಯ ವಾರ್ಡ್ ನಂ. 50ರ ವ್ಯಾಪ್ತಿಯಲ್ಲಿರುವ ನಮ್ಮ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ರಸ್ತೆಯುದ್ದಕ್ಕೂ ಏರುತಗ್ಗುಗಳಿದ್ದು, ನಡೆದುಕೊಂಡು ಹೋಗಲು ಸಾಧ್ಯವೇ ಇಲ್ಲದಷ್ಟು ಹದಗೆಟ್ಟಿದೆ. ವಾಹನ ಸವಾರರು ಇಲ್ಲಿ ಸಂಚರಿಸಲು ದುಸ್ಸಾಹಸವನ್ನೇ ಮಾಡಬೇಕು.
ಈ ರಸ್ತೆ ಮೂಲಕವೇ ಸ್ಥಳೀಯ ಮಕ್ಕಳು ಶಾಲೆಗೂ ಹೋಗಬೇಕಿದೆ~ ಎಂದು ವಿದ್ಯಾ ದರ್ಶನ ಶಾಲೆಯ ಮುಖ್ಯ ಶಿಕ್ಷಕಿ ಝಾನ್ಸಿ ಬೇಪೂರಿ ತಿಳಿಸಿದರು.
ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಡಾವಣೆಯ ನಿವಾಸಿಗಳ ಜೊತೆ ಮುಖ್ಯಮಂತ್ರಿಯವರ ಕೇಶ್ವಾಪುರದಲ್ಲಿರುವ ನಿವಾಸಕ್ಕೆ ತೆರಳಿ ಅವರು ಮನವಿ ಸಲ್ಲಿಸಿದರು.
`ರಸ್ತೆ ದುಸ್ಥಿತಿಯಿಂದಾಗಿ ಆಟೋರಿಕ್ಷಾದವರೂ ನಮ್ಮ ಬಡಾವಣೆಯ ಕಡೆಗೆ ಬರಲು ಒಪ್ಪುವುದಿಲ್ಲ. ಹೀಗಾಗಿ ತಕ್ಷಣ ನಮ್ಮ ಪ್ರದೇಶದಲ್ಲಿ ಸೂಕ್ತವಾದ ರಸ್ತೆ ನಿರ್ಮಿಸಿಕೊಡಬೇಕು~ ಎಂದು ಮನವಿಯಲ್ಲಿ ಆಗ್ರಹಿಸಿದರು. ಪಾಲಿಕೆ ಸದಸ್ಯ ಚೆನ್ನಕೇಶವಲು, ಸಂಗೀತಾ, ಸಾದಿಕ್, ಮುಸ್ತಾಕ್ ಮತ್ತಿತರರು ಇದ್ದರು.