ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ

ಕುಂದಾಪುರ: ವಸತಿಗೃಹದಲ್ಲಿ ಮಹಿಳೆಯ ಕೊಲೆ ಪ್ರಕರಣ
Last Updated 27 ಮಾರ್ಚ್ 2018, 11:41 IST
ಅಕ್ಷರ ಗಾತ್ರ

ಕುಂದಾಪುರ: 2015ನೇ ಏ.15ರಂದು ನಗರದ ಶಾಸ್ತ್ರಿ ಸರ್ಕಲ್‌ ಬಳಿಯ ವಸತಿಗೃಹವೊಂದರ ಕೊಠಡಿಯಲ್ಲಿ ಗಂಗೊಳ್ಳಿಯ ಲಲಿತಾ ದೇವಾಡಿಗ (55) ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಮುಂಬೈ ಮೂಲದ ಅಜರ್‌ ಆಫ್ಜಲ್‌ಖಾನ್‌ ಯಾನೆ ಅಜಯ್‌ ಬಾಬು (42) ಎಂಬಾತನಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರಾದ ಪ್ರಕಾಶ್‌ ಖಂಡ್ರೆ ಸೋಮವಾರ ಆದೇಶ ನೀಡಿದ್ದಾರೆ.

ಪ್ರಕರಣದ ವಿವರ: ಗುಜರಾತ್‌ ಮೂಲದ ಆರೋಪಿ ಅಫ್ಜಲ್‌ಖಾನ್‌ ಸುಮಾರು 20 ವರ್ಷದ ಹಿಂದೆ ಮುಂಬೈ ಗಾರ್ಮೆಂಟ್ಸ್‌ ಕಾರ್ಖಾನೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಸಮಯದಲ್ಲಿ ಕೊಲೆಯಾದ ಮಹಿಳೆಯ ಪುತ್ರಿ ವೈಷ್ಣವಿ ಅವರ ಪರಿಚಯವಾಗಿತ್ತು. ಏಕಮುಖ ಪ್ರೇಮಾಂಕುರವನ್ನು ಹೊಂದಿದ್ದ ಆತ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೊದಲೇ ಕಾರ್ಖಾನೆಯನ್ನು ಬಿಟ್ಟು ಬೇರೆ ಕಡೆಗೆ ಸೇರಿದ್ದ. ಈ ಅವಧಿಯಲ್ಲಿ ಮರಾಠಿ ಯುವಕನೊಂದಿಗೆ ಮದುವೆಯಾಗಿದ್ದ ವೈಷ್ಣವಿಗೆ ಎರಡು ಮಕ್ಕಳಾಗಿತ್ತು.

ಕೆಲ ಸಮಯದ ನಂತರ ಮತ್ತೆ ವೈಷ್ಣವಿಯನ್ನು ಹುಡುಕಿಕೊಂಡು ಬಂದಿದ್ದ ಅಫ್ಜಲ್‌, ತಾನು ಭಾರಿ ಶ್ರೀಮಂತ ಎನ್ನುವ ಫೋಸು ನೀಡಿದ್ದಲ್ಲದೆ, ತಾನು ಈ ಹಿಂದೆ ಪ್ರೀತಿಸುತ್ತಿದ್ದ ವಿಚಾರವನ್ನು ಹೇಳಿ ಆಕೆಯನ್ನು ಮದುವೆಗಾಗಿ ಒತ್ತಾಯ ಮಾಡಿದ್ದ. ತಾಯಿ ಒಪ್ಪಿದರೆ ತನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದ ಆಕೆಯ ಮಾತಿನ ಭರವಸೆಯಲ್ಲಿ ಗಂಗೊಳ್ಳಿಯಲ್ಲಿ ಇದ್ದ ಲಲಿತಾ ದೇವಾಡಿಗರನ್ನು ಒಪ್ಪಿಸಲು ಆರೋಪಿ ಹಲವು ಪ್ರಯತ್ನ ಮಾಡಿದ್ದ. ಇದಕ್ಕಾಗಿ ಕೆಲವು ಬಾರಿ ಮುಂಬೈನಿಂದ ಬಂದು ಹೋಗಿದ್ದ. ಯಾವುದೇ ಪ್ರಯತ್ನಗಳು ಫಲ ನೀಡದೆ ಇದ್ದಾಗ ಆಕೆಯನ್ನು ಸಾಯಿಸುವ ನಿರ್ಧಾರ ಮಾಡಿದ್ದ ಆತ 2015 ರ ಏ.7 ರಂದು ಕುಂದಾಪುರಕ್ಕೆ ಬಂದು ಪ್ರಸಿದ್ಧ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಈ ವೇಳೆ ಗಂಗೊಳ್ಳಿಯ ಮನೆಗೆ ಹೋಗಿದ್ದ ಆತ ಮನೆಯ ಸಮೀಪದಲ್ಲಿ ನಿರ್ಮಾಣವಾಗುತ್ತಿದ್ದ ದೇವಸ್ಥಾನವೊಂದಕ್ಕೆ ತಾನು ಹಣ ನೀಡುವುದಾಗಿ ನಂಬಿಸಿ ಆಕೆಯನ್ನು ವಸತಿಗೃಹಕ್ಕೆ ಬರಹೇಳಿದ್ದ.

ಏ.15ರಂದು ವಸತಿಗೃಹಕ್ಕೆ ಬಂದ ಆಕೆಗೆ ಮತ್ತು ಬರುವ ಔಷಧಿಯನ್ನು ಬೆರೆಸಿ ಜ್ಯೂಸ್‌ ನೀಡಿದ್ದ ಆತ, ಬಳಿಕ ವಯರ್‌ನಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಹೋಗುವ ಮೊದಲು ವಸತಿಗೃಹದ ಸಮೀಪದಲ್ಲಿನ ಅಂಗಡಿಯ ಹುಡುಗನಿಂದ ತಾನೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸುವಂತೆ ಕನ್ನಡದಲ್ಲಿ ಪತ್ರವನ್ನು ಬರೆದು ತೆಗೆದುಕೊಂಡು ಹೋಗಿದ್ದ. ಮುಂಬೈಗೆ ತೆರಳಿ ನಕಲಿ ಪತ್ರವನ್ನು ತೋರಿಸಿ ವೈಷ್ಣವಿ ಹಾಗೂ ಆಕೆಯ ಮಕ್ಕಳೊಂದಿಗೆ ಗುಜರಾತ್‌ಗೆ ಪರಾರಿಯಾಗಿದ್ದ.

ಕೊಲೆಗಾರನ ಬೆನ್ನು ಹತ್ತಿದ್ದ ಪೊಲೀಸರ ತಂಡ ಅಹಮದಾಬಾದ್‌ನಲ್ಲಿನ ವಸತಿಗೃಹವೊಂದರಲ್ಲಿ ಆತನನ್ನು ಬಂಧಿಸಿ ಕುಂದಾಪುರಕ್ಕೆ ಕರೆತಂದು ಜೈಲಿಗೆ ಅಟ್ಟಿತ್ತು. ಅಂದಿನ ಜಿಲ್ಲಾ ಎಸ್‌.ಪಿ ಅಣ್ಣಾಮಲೈ ಹಾಗೂ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದ ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ.ಎಂ.ದಿವಾಕರ ಪ್ರಕರಣದ ತನಿಖೆ ನಡೆಸಿ, ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಜಿಲ್ಲಾ ಅಭಿಯೋಜಕರಾದ ಬಿ.ಪ್ರಕಾಶ್ಚಂದ್ರ ಶೆಟ್ಟಿ ಸರ್ಕಾರದ ಪರವಾಗಿ ವಾದಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಮಾರ್ಚ್‌ 20ರಂದು ಆರೋಪಿ ‘ಅಫ್ಜಲ್‌ಖಾನ್‌ ದೋಷಿ’ ಎಂದು ಪರಿಗಣಿಸಿ ತೀರ್ಪು ನೀಡಿದ್ದಲ್ಲದೆ, ಶಿಕ್ಷೆಯ ಪ್ರಮಾಣವನ್ನು ಮಾರ್ಚ್‌ 26 ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.

ಕೊಲೆ ಪ್ರಕರಣಕ್ಕೆ ಜೀವಿತಾವಧಿ ಜೈಲು ಶಿಕ್ಷೆ ಹಾಗೂ ₹ 50ಸಾವಿರ ದಂಡ, ಚಿನ್ನಾಭರಣ ಸುಲಿಗೆಗಾಗಿ 3ವರ್ಷ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ, ಮೋಸ ಮಾಡಿದ್ದಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 5ಸಾವಿರ ದಂಡ, ಸುಳ್ಳು ಮರಣಪತ್ರಕ್ಕಾಗಿ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ₹ 5ಸಾವಿರ ದಂಡ, ಸುಳ್ಳು ದಾಖಲೆಯನ್ನು ಬಳಸಿದಕ್ಕೆ 5 ವರ್ಷ ಕಠಿಣ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT