ಹೊಸನಗರ: ‘ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳಿನ ಇಟ್ಟಿಗೆ ಮೇಲೆ ಮೋಸದ ಅರಮನೆ ಕಟ್ಟುತ್ತಿದ್ದಾರೆ. ಅವರ ಮಾತಿಗೆ ಮರುಳು ಆಗದಿರಿ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಸಮೀಪದ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಭರವಸೆ ಈಡೇರಿಸಿಲ್ಲ. ಈ ಸಾರಿ ಇನ್ನಷ್ಟು ಕನಸುಗಳನ್ನು ಬಿತ್ತಿ ಪಲಾಯನ ಮಾಡುವರು ಎಂದು ದೂರಿದರು.
ಮೋದಿ ಒಳ್ಳೆಯ ಭಾಷಣಕಾರ. ಮಾತಿನಿಂದ ಮನೆ ಕಟ್ಟಲು ಬರುವುದಿಲ್ಲ. ನೋಟು ರದ್ದತಿ ಸೇರಿ ಅವರ ಅನೇಕ ಯೋಜನೆಗಳು ವಿಫಲ ಆಗಿವೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರಲು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಅನಿವಾರ್ಯ ಆಗಿದೆ. ತಳಹಂತದ ಕಾರ್ಯಕರ್ತರು, ಮುಖಂಡರು ತಮ್ಮೊಳಗಿನ ಭಿನ್ನಮತ ಮರೆತು ಒಂದಾಗಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ, 'ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಒಂದು ದಶಕದಲ್ಲಿ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ' ಎಂದು ದೂರಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ಜಿ. ಚಂದ್ರಮೌಳಿ, ಏರಗಿ ಉಮೇಶ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಬಿ.ಜಿ. ನಾಗರಾಜ, ಮುಡುಬಾ ರಾಘವೇಂದ್ರ, ಪ್ರಮುಖರಾದ ಆದಿಲ್, ಚಂದ್ರಮೌಳಿ, ಧರ್ಮರಾವ್, ಜಯನಗರ ಗುರು ಇದ್ದರು.