ರಾಮನಗರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತಪರ ಬಜೆಟ್ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಕಚೇರಿ ಆವರಣದಲ್ಲಿ ಸೇರಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗಿ , ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಹಲವಾರು ಯೋಜನೆ ಜಾರಿ ಮಾಡುವ ಮೂಲಕ ರೈತ ಪರ ಎಂಬುದನ್ನು ಸಾಬೀತು ಮಾಡಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಜಯರಾಮ್ ತಿಳಿಸಿದರು.
ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಣ್ಣ ರೈತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವಾರ್ಷಿಕ ₹6ಸಾವಿರ ಹಣವನ್ನು ನೇರವಾಗಿ ರೈತರ ಖಾತೆ ಜಮಾ ಮಾಡಲು ನಿರ್ಧರ ಮೋದಿ ಸರ್ಕಾರಕ್ಕೆ ಮೊತ್ತೊಂದು ಗರಿ ತಂದುಕೊಟ್ಟಿದೆ ಎಂದು ತಿಳಿಸಿದರು.
ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ನೂತನ ಯೋಜನೆ ಟೀಕೆ ಮಾಡಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, ತಮ್ಮದೇ ಪಕ್ಷದ 60 ವರ್ಷಗಳಿಂದ ಆಡಳಿತ ನಡೆಸಿದರೂ, ಇಂತಹ ಯೋಜನೆ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಪ್ರತಿ ದಿನಕ್ಕೆ ₹17 ರೈತರಿಗೆ ಸಂದಾಯವಾಗುತ್ತದೆ ಎಂಬ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಬಜೆಟ್ನಲ್ಲಿ ಮೇಲ್ವರ್ಗ, ಮಧ್ಯಮ ಬಡವರ್ಗಗಳಿಗೆ ಸಮಾನ ಅವಕಾಶ ಮಾಡಿಕೊಟ್ಟಿದೆ. ₹2.5 ಲಕ್ಷದ ತೆರಿಗೆ ಮಿತಿಯನ್ನು ₹5 ಲಕ್ಷ ಹೆಚ್ಚಿಸುವ ಮೂಲಕ ಸಾಮಾನ್ಯರು ನೆಮ್ಮದಿಯಾಗಿ ಬಾಳುವಂತೆ ಮಾಡಿದೆ. ಇದನ್ನು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಕೇವಲ ಟೀಕೆ ಮಾಡುವುದರಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಾರಾಯಣ ರೆಡ್ಡಿ, ಪದಾಧಿಕಾರಿಗಳಾದ ಶಿವರಾಜ್, ಕೆಂಪರಾಜು, ಸಿರೇಗೌಡ, ಸ್ವಾಮಿ, ಪಾರ್ಥ, ಸಿದ್ದಪ್ಪ ಇದ್ದರು.