ಗದಗ: ‘ಇಲ್ಲಿನ ರಸ್ತೆಗಳಿಗೆ ದಶಕ ಕಳೆದರೂ ದುರಸ್ತಿ ಭಾಗ್ಯ ಲಭಿಸಿಲ್ಲ. ಮಳೆಯಾದರೆ ಸಂಪೂರ್ಣ ಜಲಾವೃತವಾಗುತ್ತವೆ’ ಎಂದು ನಗರದ 5ನೇ ವಾರ್ಡ್ ವ್ಯಾಪ್ತಿಗೆ ಬರುವ ಹರಿಜನ ಕಾಲೊನಿ, ಜನತಾ ಪ್ಲಾಟ್, ಶರಣ ಬಸವೇಶ್ವರ ನಗರ, ವಾಲ್ಮೀಕಿ ನಗರ, ನರಸಾಪೂರ ಆಶ್ರಯ ಕಾಲೊನಿ ನಿವಾಸಿಗಳು ದೂರಿದರು.
ಬೆಟಗೇರಿಯ ಅಂಬೇಡ್ಕರ್ ನಗರ, ಶಿವಾಜಿ ನಗರ, ಹರಿಜನ ಕಾಲೊನಿ, ಜನತಾ ಪ್ಲಾಟ್, ಶರಣ ಬಸವೇಶ್ವರ ನಗರ, ವಾಲ್ಮೀಕಿ ನಗರ, ರಂಗಪ್ಪಜ್ಜ ಮಠದ ಭಾಗ, ನೇಕಾರ ಕಾಲೊನಿ, ನರಸಾಪುರ ಆಶ್ರಯ ಕಾಲೊನಿಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಕನ್ಯಾಳ ಅಗಸಿಯಿಂದ ಶರಣ ಬಸವೇಶ್ವರ ನಗರದ ಮೂಲಕ ಪಾಲಾ ಬದಾಮಿ ರಸ್ತೆಗೆ ಸಂಪರ್ಕಿಸುವ ಮುಖ್ಯರಸ್ತೆ ತುಂಬ ಗುಂಡಿಗಳು ಬಿದ್ದಿವೆ. ಇಲ್ಲಿನ ಉಪ ರಸ್ತೆಗಳನ್ನು ಒಳಚರಂಡಿ ಯೋಜನೆ ಕಾಮಗಾರಿಗಾಗಿ ಅಗೆದು ಹಾಕಲಾಗಿದೆ. ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
‘ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ರಸ್ತೆಗಳ ಅಳತೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ' ಎಂದು ನರಸಾಪುರ ಆಶ್ರಯ ಕಾಲೊನಿಯ ನಿವಾಸಿ ರೇಖಾ ತಮ್ಮಣ್ಣವರ, ಮಂಜುನಾಥ ಕಡೆಮನಿ ಹೇಳಿದರು.
‘ರಾಜನಾಲಾಕ್ಕೆ ಗೋಡೆ ನಿರ್ಮಿಸುವ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡಲಾಗಿದೆ. ಮಳೆಯಾದರೆ ಹರಿಜನ ಕಾಲೊನಿಗೆ ಚರಂಡಿ ನೀರು ನುಗ್ಗುತ್ತದೆ. ಶರಣ ಬಸವೇಶ್ವರ ರಸ್ತೆ ಜಲಾವೃತವಾಗುತ್ತದೆ. ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ಕಾಲೊನಿ ನಿವಾಸಿ ಸತೀಶ ಹೂಲಿ ಹೇಳಿದರು.
₹ 1.29 ಕೋಟಿ ವೆಚ್ಚದಲ್ಲಿ ಕನ್ಯಾಳ ಅಗಸಿಯಿಂದ ಶರಣ ಬಸವೇಶ್ವರ ನಗರದವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ – ಶ್ರೀನಿವಾಸ ಕರಿ,5ನೇ ವಾರ್ಡ್ ಸದಸ್ಯ