ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಹಟ್ಟಿ: ಅದ್ಧೂರಿ ಜಾತ್ರಾಮಹೋತ್ಸವ ಇಂದಿನಿಂದ

ಹಿಂದೂ-ಮುಸ್ಲಿಂ ಭಾವೈಕ್ಯ ಪ್ರತೀಕ ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠ
ನಿಂಗಪ್ಪ ಹಮ್ಮಿಗಿ
Published 23 ಮೇ 2024, 5:43 IST
Last Updated 23 ಮೇ 2024, 5:43 IST
ಅಕ್ಷರ ಗಾತ್ರ

ಶಿರಹಟ್ಟಿ: ಹಿಂದೂ-ಮುಸ್ಲಿಂ ಭಾವೈಕ್ಯದ ಬೀಡು ಎಂದೇ ಪ್ರಸಿದ್ಧಿ ಪಡೆದ ಶಿರಹಟ್ಟಿಯ ಪುಣ್ಯಭೂಮಿಯಲ್ಲಿ ನೆಲೆಸಿ ಫಕೀರ-ಈಶ್ವರ ಎಂಬ ಉಭಯ ಧರ್ಮೀಯರ ನಾಮಾಂಕಿತದಿಂದ ಕರೆಯಲ್ಪಡುವ ಫಕೀರೇಶ್ವರರು ಎಲ್ಲರ ಆದಾಧ್ಯ ದೇವರಾಗಿದ್ದಾರೆ. ಇಂತಹ ಸಾಮರಸ್ಯವನ್ನು ಸಾರಿದ ಮಹಾತ್ಮರ ಜಾತ್ರೆ ಇಂದಿನಿಂದ ಅದ್ಧೂರಿಯಾಗಿ ನಡೆಯಲಿದೆ.

16ನೇ ಶತಮಾನದಲ್ಲಿ ಜ.ಫಕ್ಕೀರೇಶ್ವರ ಹಿಂದು ಮುಸ್ಲಿಂ ಉಭಯ ಧರ್ಮದವರಿಗೆ ಭಾವೈಕ್ಯ, ಸಹಭಾಳ್ವೆಯ ಕಣ್ಣು ತೆರೆಸಿ, ಹರಿಯ ಭಕ್ತರಿಗೆ ಹರಿಯಾಗಿ, ಹರನ ಭಕ್ತರಿಗೆ ಹರನಾಗಿ, ಹಜರತನ ಭಕ್ತರಿಗೆ ಹಜರತನಾಗಿ, ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ. ನಂತರ ಶಿರಹಟ್ಟಿಯಲ್ಲಿ ಫಕೀರೇಶ್ವರರು ನೆಲೆಸಿ ಪಾವನ ಕ್ಷೇತ್ರವನ್ನಾಗಿ ಮಾಡಿದರು.

ಉಭಯ ಧರ್ಮಗಳ ಸಂಸ್ಕೃತಿ ಸಂಕೇತಗಳನ್ನು ಶ್ರೀಮಠದ ಎಲ್ಲ ಭಾಗದಲ್ಲಿಯೂ ಗುರುತಿಸಬಹುದು. ಹೆಸರೇ ಸೂಚಿಸುವಂತೆ ಫಕೀರ ಮತ್ತು ಈಶ್ವರರ ಸಂಗಮವಾಗಿ ಫಕ್ಕೀರೇಶ್ವರರು ವೈರಾಗ್ಯಶಾಲಿಗಳು, ಪವಾಡ ಪುರುಷರಾದ ಮಹಾನ್ ಚೇತನ.

ಫಕೀರೇಶ್ವರರ ಪೂರ್ವಿತಿಹಾಸ

ಈಶ್ವರ-ಅಲ್ಲಾಹನ ಸ್ವರೂಪಿಯಾದ ಜ. ಫಕ್ಕೀರೇಶ್ವರರು 16ನೇ ಶತಮಾನದಲ್ಲಿ ವಿಜಯಪುರದ ಶಿವಯ್ಯ-ಗೌರಮ್ಮ ಎಂಬ ವೀರಶೈವ ದಂಪತಿ ಮಗುವಾಗಿ ಜನಿಸಿ, ಚನ್ನವೀರ ಎಂಬ ಹೆಸರು ಹೊಂದಿ ಅಲ್ಲಿನ ಪ್ರಸಿದ್ಧ ಸೂಫಿ ಸಂತ, ತತ್ವಜ್ಞಾನಿ ಖಾಜಾ ಅಮೀನುದ್ದೀನ್ ಅವರಿಂದ ಧರ್ಮ ಸಂಸ್ಕಾರ ಪಡೆದು ಫಕ್ಕೀರೇಶ್ವರರಾದರು.

ಕ್ರಿ.ಶ.1610ರಲ್ಲಿ ಶಿರಹಟ್ಟಿಯ ಉತ್ತರಕ್ಕಿರುವ ಕಾಡಿನಲ್ಲಿ ಫಕ್ಕೀರೇಶ್ವರರು ಬೀಡು ಬಿಟ್ಟು ಬಹು ಭಾಷಾ ವಿಷಾರದರಾಗಿ ಅವರವರ ಭಾಷೆಯಲ್ಲಿ ಅವರವರ ಧರ್ಮ ಪದ್ಧತಿಯಂತೆ ಆಚಾರ ವಿಚಾರಗಳನ್ನು ಬೋಧಿಸಿದವರು.

ಉಡುಗೆ ತೊಡುಗೆಯ ಸಾಮರಸ್ಯ:

ಸಮಾಜದಲ್ಲಿನ ಎಲ್ಲ ಮತ ಧರ್ಮಗಳ ಜನರ ನಡುವೆ ಶಾಂತಿ, ಸಹಬಾಳ್ವೆ, ಸೌಹಾರ್ದ ಮೂಡಿಸಲು ಬಯಸುತ್ತಿದ್ದ ಫಕ್ಕೀರೇಶ್ವರರು, ತಮ್ಮ ಜೀವಿತದ ಕೊನೆಯ ಘಳಿಗೆಯಲ್ಲಿ ಡೊಂಬರ ಜಾತಿಯ ಹುಡುಗನಿಗೆ ಸಂಸ್ಕಾರ ನೀಡಿ, ಧರ್ಮದ ಉತ್ತರಾಧಿಕಾರಿಯನ್ನಾಗಿ ನೇಮಿಸಿ ನಂತರ ಸಜೀವ ಸಮಾಧಿ ಹೊಂದಿದರು.

ಈ ಮಹಾಮಹಿಮರ ಗದ್ದುಗೆಯ ಮೇಲೆ ಕಟ್ಟಿದ ಭಾವೈಕ್ಯ ಸಾರುವ ಮಠವೇ ಶ್ರೀ ಜ.ಫಕ್ಕೀರೇಶ್ವರ ಸಂಸ್ಥಾನ ಮಠ. ಮಠದ ವಾಸ್ತು  ಶಿಲ್ಪ ಇಂಡೋ–ಇಸ್ಲಾಮಿಕ್‌ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹಿಂದೂಗಳ ಸಂಕೇತವಾಗಿ ಆನೆ, ಮುಸ್ಲಿಮರ ಸಂಕೇತವಾಗಿ ಒಂಟೆ ಶ್ರೀಮಠದ ವಾಹನಗಳು, ನಗಾರಿ ಬಾರಿಸುವ ನಗರಿಖಾನಾ ಭವನ ಇಲ್ಲಿನ ವಿಶೇಷವಾಗಿದೆ.

ಉಭಯ ಸಂಸ್ಕೃತಿಯ ಪ್ರತಿಪಾಲಕ

ಶ್ರೀಮಠದ ಶ್ರೀಗಳಿಗೆ ಪಟ್ಟಾಭಿಷೇಕವಾಗುವಾಗ ಹಿಂದೂ ಮುಸ್ಲಿಂ ಧರ್ಮದ ಗುರುಗಳು ದೀಕ್ಷೆ ಕೊಡುತ್ತಾರೆ. ಮೊದಲು ಫಕೀರರು ದೀಕ್ಷೆ ಕೊಟ್ಟು ಕಲ್ಮಾ ಬೋಧಿಸುತ್ತಾರೆ. ನಂತರ 41 ದಿನಕ್ಕೆ ಶಿವ ದೀಕ್ಷೆ ನೀಡಲಾಗುತ್ತದೆ. ಅದೇ ರೀತಿ ಸ್ವಾಮಿಗಳು ಲಿಂಗೈಕ್ಯರಾಗುವಾಗ ಉಭಯ ಧರ್ಮಗಳ ಪ್ರಕಾರ ಸಂಸ್ಕಾರ ಮಾಡಲಾಗುತ್ತದೆ. ಮೊದಲು ಮುಸ್ಲಿಂ ಪದ್ಧತಿಗನುಗುಣವಾಗಿ ಶವ ಸಂಸ್ಕಾರ ನಂತರ ಹಿಂದು ಧರ್ಮದ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ಕರ್ನಾಟಕದ ಮಂಡ್ಯ, ಮೈಸೂರ, ಬೆಂಗಳೂರ, ಬಿಜಾಪೂರ(ವಿಜಯಪುರ), ರಾಯಚೂರ, ಕಲಬುರ್ಗಿ, ಚಿತ್ರದುರ್ಗ, ಬೆಳಗಾಂವ, ಧಾರವಾಡ ಇನ್ನೂ ಮುಂತಾದ ಜಿಲ್ಲೆಗಳಲ್ಲಿ ಸುಮಾರು 60 ಶಾಖಾಮಠಗಳನ್ನು ಹೊಂದಿದ ಶ್ರೀಮಠವು ಧಾರ್ಮಿಕ, ಸಾಹಿತ್ಯಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಠದಿಂದ 5 ಪ್ರೌಢ ಶಾಲೆಗಳನ್ನು ನಡೆಸಿ ಜ್ಞಾನ ದಾಸೋಹವನ್ನು ಪೂಜ್ಯರು ಮಾಡುತ್ತಿದ್ದಾರೆ.

ಇಷ್ಟೆಲ್ಲ ಮಹತ್ವವನ್ನು ಹೊಂದಿದ ಜ. ಫಕೀರೇಶ್ವರರ ಬಗೆಗೆ ಈ ಭಾಗದ ಜನತೆಗೆ ಅಪಾರವಾದ, ಅನನ್ಯವಾದ, ಭಕ್ತಿಯನ್ನು ಹೊಂದಿ ತಮ್ಮ ಮಕ್ಕಳಿಗೆ ಫಕ್ಕೀರಪ್ಪ, ಫಕೀರಸಾಬ್, ಫಕ್ಕೀರವ್ವ, ಫಕ್ಕೀರೇಶ ಎಂದು ನಾಮಕರಣ ಮಾಡಿ ಆ ಮಹಾತ್ಮನನ್ನು ನಿತ್ಯ ಸ್ಮರಿಸುತ್ತಿರುವದು ಕಂಡು ಬರುವದು ಸಾಕ್ಷಿಯಾಗಿದೆ.

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಫಕೀರೇಶ್ವರ ಮಠದಲ್ಲಿನ ನಗಾರಿಖಾನೆ
ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಫಕೀರೇಶ್ವರ ಮಠದಲ್ಲಿನ ನಗಾರಿಖಾನೆ
ಆಗಿಹುಣ್ಣಿಯೆಂದು ರಥೋತ್ಸವ
ಪ್ರತಿ ವರ್ಷದಂತೆ ವೈಶಾಖ ಬುದ್ಧ ಪೂರ್ಣಿಮಾ ಆಗಿ ಹುಣ್ಣಿಮೆ ಮೇ 23 ರಂದು ರಥೋತ್ಸವ ಶುಕ್ರವಾರ ಕಡುಬಿನ ಕಾಳಗ ಉತ್ಸವ ನೆರವೇರಲಿದೆ. ಮಠದ ಸಂಪ್ರದಾಯದಂತೆ ಕಾರ್ಯಕ್ರಮಗಳು ಜರುಗಲಿವೆ. ‘ಸರ್ವಂ ಲಿಂಗಮಯ ಇದಂ ಜಗತ್’ ಎಂದು ಅರಿತಿರುವ ಪೂಜ್ಯರು ಹಾಗೂ ಶ್ರೀಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಸಮಾಜದ ಕ್ಷೇಮಾಭಿವೃದ್ಧಿಗೆ ಭದ್ರ ಬುನಾದಿ ಧರ್ಮ ಎಂದು ಭಾವಿಸಿ ಮಠವನ್ನು ಧರ್ಮದ ನೆಲೆಯನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ. ಮಠದಲ್ಲಿ ಜರುಗುವ ಸಮಾರಂಭಗಳಿಗೆ ನಾಡಿನ ಹೆಸರಾಂತ ಪೂಜ್ಯರನ್ನು ಸಾಹಿತಿಗಳನ್ನು ಕಲಾವಿದರನ್ನು ಬರಮಾಡಿಕೊಂಡು ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪ್ರತಿ ಅಮಾವಾಸ್ಯೆಯ ದಿನ ಶ್ರೀಮಠದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಸಿ ಜ್ಞಾನದ ತಿರುಳನ್ನು ಧರ್ಮದ ಮರ್ಮವನ್ನು ಜನತೆಗೆ ತಿಳಿಸುವ ಮೂಲಕ ಸಮಾಜ ಸೇವೆ ಗೈಯುತ್ತಿದ್ದಾರೆ.
ಶ್ರೀಗಳ ಸಾಹಿತ್ಯ ಸೇವೆ
ಫಕೀರ ಸಿದ್ಧರಾಮ ಶ್ರೀಗಳು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ವರದಾನೇಶ್ವರಿ ಗುಡ್ಡಾಪುರದ ದಾನಮ್ಮ ಸದಾಚಾರ ಸಕಲೇಶ ಮಾದರಸ ಸಂಶಿ ಅಜ್ಜನವರು ಅಬಾನಾ ಎಂಬ ಕೃತಿಗಳನ್ನು ರಚಿಸಿದ್ದಾರೆ. ಹುಬ್ಬಳ್ಳಿ ಮೂರುಸಾವಿರ ಮಠದ ಗ್ರಂಥಮಾಲಾ ಪ್ರಕಾಶನದಿಂದ ಪ್ರಕಟಣೆಗೊಂಡಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ ವಿಭಾಗದವರು 375ನೇ ಉಪನ್ಯಾಸ ಶಿಬಿರವನ್ನು 18-2-1987 ಹಾಗೂ 19-12-1987ರಂದು ಶಿರಹಟ್ಟಿ ಮಠದಲ್ಲಿ ನಡೆಸಿ ಪೂಜ್ಯರ "ಕರ್ತೃ ಶ್ರೀ ಜಗದ್ಗುರು ಫಕ್ಕೀರೇಶ್ವರರು" ಎನ್ನುವ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT