ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಪರಿಣಾಮ ಮಣ್ಣಿನ ರಸ್ತೆಗಳು ಕೆಸರು ಗದ್ದೆಗಳಾಗಿವೆ.
ಇಲ್ಲಿನ 7ನೇ ವಾರ್ಡನ ಬಡ್ನಿ ಅವರ ಪ್ಲಾಟ್ ನಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿದ್ದು, ರಸ್ತೆಗಳನ್ನ ಅಭಿವೃದ್ಧಿಪಡಿಸಿಲ್ಲ. ಸತತ ಮಳೆ ಆಗುತ್ತಿರುವುದರಿಂದ ರಸ್ತೆ ಕೆಸರು ಗದ್ದೆಯಾಗದೆ, ಹೀಗಾಗಿ ನಿವಾಸಿಗಳು ಸಂಚಾರಕ್ಕೆ ಪರದಾಡುವ ಸ್ಥಿತಿ ಉಂಟಾಗಿದೆ. ಇಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 147 ಕ್ಕೆ ಹೋಗುವ ರಸ್ತೆ ಕೂಡಾ ಕೆಸರಾಗಿದ್ದು, ಮಕ್ಕಳು ಶಾಲೆಗೆ ಹೋಗುವುದೇ ದುಸ್ತರವಾಗಿದೆ.
ಸತತವಾಗಿ ಜಿಟಿಜಿಟಿ ಮಳೆಯಾಗುತ್ತಿರುವ ಪರಿಣಾಮ ಮಣ್ಣಿನ ಮನೆಗಳು ಸೋರುತಿದ್ದು, ಮಾಳಿಗೆಗೆ ತಾಡಪತ್ರಿ ಹೊದಿಕೆ ಹಾಕಿ ರಕ್ಷಣೆ ಮಾಡಲಾಗಿದೆ. ಇನ್ನೂ ಮುಂಗಾರು ಮಳೆ ವೈಫಲ್ಯದ ಪರಿಣಾಮ ಬಿತ್ತನೆ ಆಗದೇ ಇರುವುದರಿಂದ ಕೃಷಿಕರು ಮನೆಯಲ್ಲೆ ಉಳಿಯುವಂತಾಗಿದೆ. ಚಿಂಚಲಿ ಗ್ರಾಮದ ಮುಖ್ಯ ರಸ್ತೆಗಳು ಗುಂಡಿ ಬಿದ್ದು ನೀರು ತುಂಬಿಕೊಂಡಿದ್ದು, ವಾಹನ ಚಾಲಕರು ಪರದಾಡುವ ಸ್ಥಿತಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.