ಗದಗ: ಜಿಲ್ಲೆಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಿಗ್ಗೆಯಿಂದ ಒಂದೇ ಸಮನೇ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕೆರೆಗಳಂತಾಗಿವೆ. ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಕಂಗಾಲಾಗಿದ್ದಾರೆ.
ಮಣ್ಣಿನ ಮನೆಗಳಲ್ಲಿ ವಾಸಿಸುವ ಜನ ಆತಂಕದಲ್ಲೇ ಹೊತ್ತು ಕಳೆಯುತ್ತಿದ್ದಾರೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸಿದರು. ಮಳೆ ಹೆಚ್ಚಾದ ಕಾರಣ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದಲ್ಲಿ ಮಳೆ ಹೆಚ್ಚಾಗಿದ್ದು, ಮಣ್ಣಿನ ಮನೆಯ ನಿವಾಸಿಗಳು ಕುಸಿಯುವ ಭೀತಿಯಿಂದ, ಭಯದಲ್ಲಿಯೇ ವಾಸಮಾಡುತ್ತಿದ್ದಾರೆ. ಹೊಲಗಳಲ್ಲಿ ನೀರು ತುಂಬಿದ್ದು ಹೆಸರು, ಈರುಳ್ಳಿ ಬೆಳೆಗಳು ಜಲಾವೃತಗೊಂಡಿವೆ.
ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನದಿ ಅಂಚಿನ ಗ್ರಾಮಸ್ಥರು ಪ್ರವಾಹದ ಭೀತಿಯಲ್ಲಿದ್ದಾರೆ. ರೈತರ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಂಕು ಕವಿದಿದೆ.
ನಾಗರ ಪಂಚಮಿ ಹಬ್ಬ ಆಚರಿಸುವ ಹುಮ್ಮಸ್ಸಿನಲ್ಲಿದ್ದ ಸಾರ್ವಜನಿಕರು ಸಹ ಮಳೆಯಿಂದ ನಿರಾಸೆಗೊಂಡಿದ್ದಾರೆ.
ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಮಂಗಳವಾರ ನಸುಕಿನಲ್ಲಿ ಮಳೆ ಆರ್ಭಟ ಶುರುವಾಗಿದೆ. ಮಳೆಯಿಂದಾಗಿ ಸಮೀಪದ ಶೆಟ್ಟಿಕೇರಿ ಗ್ರಾಮದಲ್ಲಿ ದೊಡ್ಡ ಚರಂಡಿ ಕಟ್ಟಿದ್ದರಿಂದ ರಾಡಿ ನೀರು ಗ್ರಾಮದೊಳಗೆ ಹರಿಯುತ್ತಿದ್ದು ಜನರಿಗೆ ತೊಂದರೆ ಆಗಿದೆ.
ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿ ವ್ಯಾಪ್ತಿಯಲ್ಲೂ ನಿನ್ನೆ ಮಧ್ಯರಾತ್ರಿಯಿಂದ ನಿರಂತರವಾಗಿ ಜೋರು ಮಳೆ ಸುರಿಯುತ್ತಿದೆ.
ಬಹುತೇಕ ಚೆಕ್ ಡ್ಯಾಂ, ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ರೈತರ ಜಮೀನುಗಳಲ್ಲಿ ನೀರು ನಿಂತಿವೆ. ಮಳೆ ಮುಂದುವರಿದಿದೆ.