ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಗಣಪ ಹೋದ, ಜೋಕುಮಾರ ಬಂದ!

Published 25 ಸೆಪ್ಟೆಂಬರ್ 2023, 5:04 IST
Last Updated 25 ಸೆಪ್ಟೆಂಬರ್ 2023, 5:04 IST
ಅಕ್ಷರ ಗಾತ್ರ

ನರಗುಂದ: ‘ಅಡ್ಡಡ್ಡ ಮಳಿ ಬಂದು.. ದೊಡ್ಡದೊಡ್ಡ ಕೆರೆ ತುಂಬಿ..‌ಗೊಡ್ಡುಗಳೆಲ್ಲ ಹೈನಾಗಿ.....ಜೋಕುಮಾರ ಮಳಿ ತಂದ ..‌' .ಎಂಬ ಜೋಕುಮಾರನ ಬಗ್ಗೆ ಮಹಿಳೆಯರು ಪದಗಳ ಮೂಲಕ ಉತ್ತರ ಕರ್ನಾಟಕದಲ್ಲಿ ಗಣಪತಿ ಹೋದ ಮಾರನೇ ದಿನ ಜನ್ಮ ತಾಳುವ ಜೋಕುಮಾರ ರೈತರ ಪಾಲಿಗೆ ವರವಾಗಿ ಪರಿಣಮಿಸಿದ್ದಾನೆ.

ಮಳೆಗಾಗಿ ಜೋಕುಮಾರನನ್ನು ನೆನೆದು ಪ್ರಾರ್ಥಿಸುವ ಮಹಿಳೆಯರು ಜೋಕುಮಾರ ಮೂರ್ತಿಯನ್ನು ಏಳು ದಿನಗಳ ಕಾಲ ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲೆಡೆ ಹೊತ್ತು
ಸಂಚರಿಸುತ್ತಾರೆ. ಈ ಹಬ್ಬವನ್ನು ಪಟ್ಟಣದಲ್ಲಿ ಬಾರಕೇರ ಕುಟುಂಬದವರು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ಜನಪದ ಆಚರಣೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣದ ಯಲ್ಲವ್ವ,ಮಹಾದೇವಿ, ನಾಗರತ್ನ ಹಾಗೂ ಶರಣಪ್ಪ ಬಾರಕೇರ ಪಟ್ಟಣದಲ್ಲಿ ಹಾಡು ಹಾಡುತ್ತಾ ಮನೆಮನೆಗಳಿಗೆ ತೆರಳಿ ಜೋಕುಮಾರನ ದರ್ಶನ ಮಾಡಿಸುವುದು ವಿಶೇಷವಾಗಿ ಕಂಡುಬರುತ್ತದೆ. ಇದನ್ನು. ಚಿಣ್ಣರು , ಯುವಕರು, ರೈತರು ನೋಡಿ ಕೇಳಿ ಅನುಭವಿಸುವುದು ವಿಶೇಷ.

ಜೋಕುಮಾರನ ಹಿನ್ನೆಲೆ: ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಗಣೇಶ ಬಂದು ಹೋದ ನಂತರ ಗಂಗಾಮತದ ವಂಶಸ್ಥ ಹೆಣ್ಣುಮಕ್ಕಳು, ಬೇವಿನ ಸೊಪ್ಪು ತುಂಬಿದ ಬುಟ್ಟಿಯಲ್ಲಿ ಮಣ್ಣಿನ ಮೂರ್ತಿಯೊಂದನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ದವಸ ಧಾನ್ಯಗಳನ್ನು ಪಡೆಯುತ್ತಾರೆ. ಈತನ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಬಲವಾಗಿದೆ.

ಇದು ಭಾದ್ರಪದ ಶುದ್ದ ನವಮಿಯಿಂದ ಪೌರ್ಣಿಮೆಯವರೆಗೂ ಅಂದರೆ ಏಳು ದಿನಗಳವರೆಗೆ ಆಚರಿಸುವ ಜಾನಪದ ಹಬ್ಬವಾಗಿದೆ. ಜೋಕುಮಾರನನ್ನು ಕುಂಬಾರ, ಪತ್ತಾರ, ಬಡಿಗೇರ ಮನೆಯ ಮಣ್ಣಿನಲ್ಲಿ ಮಾಡುತ್ತಾರೆ. ಅಗಲ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿಯುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ಹೆಣ್ಣುಕ್ಕಳು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಾರೆ.

ಜೋಕುಮಾರನ ಹುಟ್ಟು, ಸಾವು, ಪುಂಡತನ, ಕಾಮ ಹೀಗೆ ಇತರೆ ಅವನ ಸ್ವಭಾವಗಳ ಕುರಿತಾದ ಹಾಡುಗಳನ್ನು ರಾಗ ಬದ್ಧವಾಗಿ ಹಾಡುತ್ತಾರೆ. ಮನೆ ಮುಂದೆ ಬಂದ ಜೋಕುಮಾರನಿಗೆ ಮನೆಯವರು ಮನೆಯಲ್ಲಿರುವ ಚಿಕ್ಕಾಡ, ಗುಂಗಾಡ(ಸೊಳ್ಳೆ), ತಿಗಣೆಗಳೆಲ್ಲವೂ ನಿನ್ನೊಂದಿಗೆ ಹೋಗಲಿ ಎಂದು ಇವನಿಗೆ ಮೆಣಸಿನ ಕಾಯಿ, ಉಪ್ಪು ನೀಡುತ್ತಾರೆ. ಅಲ್ಲದೇ ಜೋಳ, ಆಹಾರ ಪದಾರ್ಥಗಳನ್ನು ನೀಡಿ ಪೂಜಿಸುತ್ತಾರೆ.

ಉತ್ತಮ ಮಳೆ ನೀಡಿ ಸಮೃದ್ಧವಾದ ಬೆಳೆ ನೀಡೆಂದು ಬೇಡಿಕೊಳ್ಳುತ್ತಾರೆ. ಜೋಕುಮಾರನನ್ನು ಹೊತ್ತ ಹೆಣ್ಣುಮಕ್ಕಳು ರೈತರಿಗೆ ಪುನಃ ಜೋಕುಮಾರನ ಪ್ರಸಾದವೆಂದು ಅಂಬಲಿ(ಕಿಚಡಿ)ಯನ್ನು ಕೊಡುವರು. ಇದನ್ನೇ ರೈತರು ತಮ್ಮ ಹೊಲಗಳಿಗೆ ಹೋಗಿ ಚರಗವೆಂದು ಚೆಲ್ಲುತ್ತಾರೆ. ಈ ಸಂಪ್ರದಾಯ ಇಂದಿಗೂ ಅಂಬಲಿ ಚರಗವೆಂದು ಪ್ರಸಿದ್ಧಿಯಿದೆ.

ಅಲ್ಪಾಯುಷಿಯಾದ ಜೋಕುಮಾರ್‌ನನ್ನು ಮುಂದಿನ ಹುಣ್ಣಿಮೆಯ ದಿನ ರಾತ್ರಿ ಈತನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತಾ ಹಾಡುತ್ತಾರೆ. ಹೆಣ್ಣು
ಮಕ್ಕಳ ಸೆರಗು ಮುಳ್ಳಿಗೆ ತಾಗುತ್ತದೆ. ಜೋಕುಮಾರನೇ ಸೀರೆ ಎಳೆದನೆಂದು ಗಂಡಸರು ಆತನನ್ನು ಒನಕೆಯಿಂದ ಹೊಡೆಯುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ಉತ್ತಮ ಮಳೆಗಾಲವೆಂದು, ಬೋರಲು ಬಿದ್ದರೆ ಬರಗಾಲವೆಂದು ಹಳ್ಳಿಗಳಲ್ಲಿ ನಂಬುತ್ತಾರೆ. ನಂತರ ರುಂಡ-ಮುಂಡಗಳನ್ನು ಊರಿಮುಂದಿನ ಹಳ್ಳ ಅಥವಾ ಕೆರೆ ಒಯ್ದು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಮುಚ್ಚಿ ಬರುತ್ತಾರೆ.

ಆಗ ಜೋಕುಮಾರನು ನರಳುತ್ತಾನೆ. ಇದರಿಂದ ತಮಗೆ ಅಪಾಯವಾಗುವುದು ಎಂದು ಅಗಸರು ಮೂರು ದಿನಗಳ ಕಾಲ ತಮ್ಮ ಬಟ್ಟೆ ತೊಳೆಯುವ ಕಾಯಕವನ್ನು ನಿಲ್ಲಿಸುತ್ತಾರೆ. ನಾಲ್ಕನೇ ದಿನ ಆತನನ್ನು ಸಂತೈಸಲು ಕರ್ಮಾದಿ ಕಾಯಕ ಮಾಡುತ್ತಾರೆ. ಜೋಕುಮಾರ ಸತ್ತು ಪರಮಾತ್ಮನ ಹತ್ತಿರ ಹೋಗಿ ಭೂಲೋಕದಲ್ಲಿ ಮಳೆ ಬೆಳೆ ಸರಿ ಇಲ್ಲ ಅವರಿಗೆ ಮಳೆಯ ಆವಶ್ಯಕತೆ ಇದೆ ಎಂಬ ವರದಿ ಮಾಡುತ್ತಾನೆ. ಆದ್ದರಿಂದ ಜೋಕುಮಾರ ಮಳೆ ಕೊಡಿಸುವ ದೇವರು ಎಂಬ ನಂಬಿಕೆ, ದಂತ ಕಥೆ ವಿವಿಧ ಪೌರಾಣಿಕ ಕಾವ್ಯಗಳಿಂದ ತಿಳಿದುಬರುತ್ತದೆ.

'ಇಂದಿನ ಆಧುನಿಕತೆಯ ಜೀವನ ಶೈಲಿಯಲ್ಲಿ ಹಬ್ಬಗಳ ಆಚರಣೆಗಳಲ್ಲಿ ಶ್ರದ್ಧೆಕಡಿಮೆಯಾಗುತ್ತಿರುವುದು ವಿಷಾದಕರ. ಪ್ರಸ್ತುತ ದಿನಗಳಲ್ಲಿ ಜೋಕುಮಾರ ಹಬ್ಬ ವಿಶಿಷ್ಟ ಆಚರಣೆ ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ'ಎಂದು ಪಟ್ಟಣದ ನಿವಾಸಿ ಚಂದ್ರಗೌಡ ಪಾಟೀಲ ಹೇಳುತ್ತಾರೆ.

ಕಲೆ ಸಂಸ್ಕೃತಿ ಆಚಾರ ವಿಚಾರಗಳನ್ನು ಇಂದಿನ ಆಧುನಿಕತೆಯಲ್ಲಿಯೂ ಸಹ ಇಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವುದು ವಿಶೇಷ
-ಚಂದ್ರಗೌಡ ಪಾಟೀಲ, ಪಟ್ಟಣದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT