ಗದಗ: ನಗರ ಹಾಗೂ ಜಿಲ್ಲೆಯಾದ್ಯಂತ ಶುಕ್ರವಾರ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ವಿವಿಧೆಡೆ ಆಂಜನೇಯನ ದೇವಸ್ಥಾನಗಳಲ್ಲಿ ಬಾಲ ಹನುಮನ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು.
ದೇವಸ್ಥಾನಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಸೂರ್ಯೋದಯಕ್ಕೆ ಸರಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು. ನಗರದ ಕುಷ್ಠಗಿಚಾಳ ಮತ್ತು ಗಾಂಧಿನಗರದಲ್ಲಿರುವ ಹನುಮಂತನ ದೇವಸ್ಥಾನಗಳಲ್ಲಿ ಬೆಳಿಗ್ಗೆ ತೊಟ್ಟಿಲೋತ್ಸವ ನಡೆಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಹನುಮನ ತೊಟ್ಟಿಲು ತೂಗಿ ಭಕ್ತಿ ಭಾವ ಮೆರೆದರು.
ಭಜನೆ, ಕೀರ್ತನೆ, ಹನುಮಾನ್ ಚಾಲೀಸಾ, ಧ್ಯಾನದ ಮೂಲಕ ದಿನವಿಡೀ ಹನುಮನ ಸ್ಮರಣೆ ನಡೆಯಿತು.ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ನೈವೇದ್ಯ, ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆದವು.
ಹರಕೆ ಹೊತ್ತು ನೂರಾರು ಭಕ್ತರು ದೇವಾಲಯಗಳಿಗೆ ತೆರಳಿ ಆಂಜನೇಯನ ದರ್ಶನ ಪಡೆದರು.ಸಂಘ–ಸಂಸ್ಥೆಗಳಿಂದ ಆಂಜನೇಯನ ಭಾವಚಿತ್ರ ಹಾಗೂ ಮೆರವಣಿಗೆ ಆಯೋಜಿಸಲಾಗಿತ್ತು.
ಸಿದ್ಧಲಿಂಗ ನಗರದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಭಾಗವಹಿಸಿದ್ದರು. ಬೆಳಿಗ್ಗೆ ರುದ್ರಾಭಿಷೇಕ, ಮಾರುತಿ ತೊಟ್ಟಿಲೋತ್ಸವ, ಕುಂಕುಮ ಪೂಜೆ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.