ಬಯಲು ಪ್ರದೇಶಗಳಲ್ಲಿ ಮರದ ಕೊಂಬೆಯ ಮೇಲೆ ಠೀವಿಯಿಂದ ಕುಳಿತು, ಸಿಳ್ಳೆ ಹಾಕುವ ಈ ಉದ್ದ ಬಾಲದ ಚಾತಕ ಪಕ್ಷಿಗಳನ್ನು ರೈತರು, ಮಳೆಯ ಭರವಸೆ ನೀಡುವ ಪಕ್ಷಿ ಎಂದೇ ನಂಬುತ್ತಾರೆ. ಸದ್ಯ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಹೆಸರುಕಾಳು, ಶೇಂಗಾ, ಗೋವಿನ ಜೋಳ ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದಾಗಿ ರೈತರು ಮುಗಿಲಿನತ್ತ ಮುಖ ನೆಟ್ಟು ಕುಳಿತಿದ್ದಾರೆ. ಅಲ್ಲಲ್ಲಿ ಕಾಣಸಿಗುವ ಚಾತಕ ಪಕ್ಷಿಗಳು ಮಳೆಯ ಭರವಸೆಯನ್ನು ಹೆಚ್ಚಿಸಿವೆ.