ಡಂಬಳ: ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದೆ. ಅದರಲ್ಲಿಯು ವಿಶೇಷವಾಗಿ ತಾಲ್ಲೂಕಿನ ಹಳ್ಳಿಕೇರಿ ಹಳ್ಳಿಗುಡಿ, ಯಕಲಾಸಪೂರ, ಹೈತಾಪೂರ, ವೆಂಕಟಾಪೂರ ಗ್ರಾಮಗಳ ಬರಗಾಲದ ಸ್ಥಿತಿ ಇದಕ್ಕಿಂತ ಭೀಕರತೆಯಿಂದ ಆವರಿಸಿರುತ್ತದೆ.
ಜಾನುವಾರುಗಳ ಹಾಗೂ ವನ್ಯಜೀವಿಗಳು ರಣಭೀಕರತೆಗೆ ತತ್ತರಿಸಿ ಹೋಗಿವೆ. ಇಂತಹ ಬರದ ಮಧ್ಯೆ ಹಳ್ಳದಲ್ಲೊಂದು ಜೀವಜಲ ಪತ್ತೆಯಾಗಿದ್ದು ಜಾನುವಾರುಗಳಿಗೆ ಕಾಮಧೇನು ಆಗಿದೆ. ಬೆಳಗ್ಗೆ 11 ಗಂಟೆಯಾದರೆ ಸಾಕು ಬಿಸಿಲಿನ ತಾಪಕ್ಕೆ ಜನ ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಬಿಸಿಲಿನಲ್ಲಿ ಜನ ವಿವಿಧ ಗಿಡಗಳ ನೆರಳಿಗೆ ಮೊರೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ತಗೆದುಕೊಳ್ಳಬಹುದು. ಆದ್ರೆ ಜಾನುವಾರುಗಳು ನಿತ್ಯ ಕುಡಿಯುವ ನೀರಿಗಾಗಿ ಅಲೆದಾಡುತ್ತವೆ. ಇಂತಹ ಭೀಕರ ಬರಗಾಲದಲ್ಲಿ ಯಕಲಾಸಪೂರ ಗ್ರಾಮದ ಬಳಿಯ ಹಳ್ಳದ ಹೊಂಡದಲ್ಲಿ ನೀರು ಚಿಮ್ಮುತ್ತಿರುವುದರಿಂದ ಈ ಭಾಗದಲ್ಲಿ ಆಡು ಕುರಿ ಎಮ್ಮೆ ಆಕಳು ಸೇರಿದಂತೆ ವನ್ಯಜೀವಿಗಳ ನೀರಿನ ದಾಹ ತಣಿಸುತ್ತಿದೆ.
‘ಮಳೆ ಕೈಕೊಟ್ಟ ಪರಿಣಾಮ ಹಳ್ಳಕೊಳ್ಳಗಳು. ಕೃಷಿ ಹೊಂಡ, ಕೆರೆಗಳು ನೀರಿಲ್ಲದೆ ಆಟದ ಮೈದಾನದಂತೆ ಕಾಣುತ್ತಿವೆ. ಕೆಲಭಾಗದಲ್ಲಿ ಜನರಿಗೂ ಕುಡಿಯುವ ನೀರಿನ ತೊಂದರೆಯಿದೆ. ಆದ್ರೆ ಹಳ್ಳದಲ್ಲಿ ನೀರು ಉಕ್ಕುತ್ತಿರುವುದು ದೇವರ ಸೃಷ್ಟಿ ಇರಬೇಕು. ಮೂಕ ಪ್ರಾಣಿಗಳ ಅನುಭವಿಸುತ್ತಿರುವ ಸಂಕಷ್ಠಕ್ಕೆ ಈ ನೀರು ತುಂಬಾ ಆಸರೆಯಾಗಿದೆ. ಕುರಿ ಆಡು ಜಾನುವಾರುಗಳನ್ನು ಮೇಯಿಸಲು ಹೋದವರು ಸುತ್ತಮುತ್ತಲು ಕೃಷಿ ಜಮೀನು ಹೊಂದಿರುವ ರೈತರಿಗೂ ನೀರು ಕಾಮಧೇನು ಆಗಿದೆ’ ಎನ್ನುತ್ತಾರೆ ಯಕಲಾಸಪೂರ ಗ್ರಾಮದ ಮುದಕಪ್ಪ ಹರಿಜನ ಮತ್ತು ಮಹಾಂತೇಶ ಮುಗಳಿ.
ಬತ್ತಿದ ಕೃಷಿ ಹೊಂಡ
ರೈತರು ಬಿತ್ತನೆ ಮಾಡಿದಾಗ ಮಳೆ ಕೈಕೊಟ್ಟ ಸಮಯದಲ್ಲಿ ಬೆಳೆಗಳು ಒಣಗಬಾರದು ಎನ್ನುವ ಉದ್ದೇಶದಿಂದ ಹಾಗೂ ಜಮೀನುಗಳಲ್ಲಿ ಅಂರ್ತಜಲ ಹೆಚ್ಚಳವಾಗಬೇಕು ಎನ್ನುವ ದೃಷ್ಟಿಕೋನದಿಂದ ರೈತರ ಜಮೀನಗಳಲ್ಲಿ ಕೃಷಿ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಮಳೆ ಕೊರತೆ ಪರಿಣಾಮ ಕೃಷಿ ಹೊಂಡಗಳಲ್ಲಿ ಒಂದು ಹನಿಯು ನೀರು ಇಲ್ಲದಂತಹ ಸ್ಥಿತಿ ಇದೆ. ಮುಂಡರಗಿ ತಾಲ್ಲೂಕಿನಲ್ಲಿ ಕೃಷಿಭಾಗ್ಯ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಕೃಷಿ ಹೊಂಡಗಳ ನಿರ್ಮಾಣದ ವಿವರ: ಫಲಾನುಭವಿಗಳ ಸಂಖ್ಯೆ 2018 -2019ರಲ್ಲಿ ಸಾಮಾನ್ಯ 255 ಪರಿಶಿಷ್ಟ ಜಾತಿ 61 ಪರಿಶಿಷ್ಟ ಪಂಗಡ 8 2019-2020ರಲ್ಲಿ ಸಾಮಾನ್ಯ 182 ಪರಿಶಿಷ್ಟ ಜಾತಿ 17 ಪರಿಶಿಷ್ಟ ಪಂಗಡ 12. ಅಲ್ಲದೆ ಕಳೆದ ಎರಡು ಮೂರು ವರ್ಷದಿಂದ ಸ್ಥಗಿತಗೊಂಡಿದ್ದ ಈ ಯೋಜನೆಗೆ 2024ರಲ್ಲಿ ಮತ್ತೆ ಪ್ರಾರಂಭವಾಗಿದೆ. 2023-2024ನೇ ಸಾಲಿನಲ್ಲಿ ಮುಂಡರಗಿ ತಾಲ್ಲೂಕಿನಲ್ಲಿ ಕೃಷಿಭಾಗ್ಯ ಯೋನೆಯಡಿ 240 ಅರ್ಜಿಗಳು ಬಂದಿದ್ದವು. ಲಾಟರಿ ಮೂಲಕ ಸಾಮಾನ್ಯ 53 ಪರಿಶಿಷ್ಟ ಜಾತಿ 12 ಪರಿಶಿಷ್ಟ ಪಂಗಡ 5 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಜಾವಾಣಿಗೆ ಮಾಹಿತಿ ನೀಡುತ್ತಾರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.