ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಯಿಯೇ ಮೊದಲ ಗುರು: ತೋಂಟದ ಸಿದ್ಧರಾಮ ಶ್ರೀ

2,695ನೇ ಶಿವಾನುಭವ ಕಾರ್ಯಕ್ರಮದಲ್ಲಿ ವಿಶ್ವ ತಾಯಂದಿರ ದಿನಾಚರಣೆ
Published 31 ಮೇ 2024, 15:23 IST
Last Updated 31 ಮೇ 2024, 15:23 IST
ಅಕ್ಷರ ಗಾತ್ರ

ಗದಗ: ತಾಯಿಗಿಂತ ದೊಡ್ಡವರು ಯಾರೂ ಇಲ್ಲ. ತಾಯಿಯಿಂದ ಸಂಸ್ಕಾರ ಮತ್ತು ಪಾಠ ಕಲಿತವರೇ ಧನ್ಯರು. ಹುಟ್ಟಿದ ಶಿಶುವಿಗೆ ತಾಯಿಯೇ ಮೊದಲ ಗುರು ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದಿಂದ ನಗರದ ತೋಂಟದಾರ್ಯ ಮಠದಲ್ಲಿ ನಡೆದ 2,695ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಉಪ್ಪಿನ ರುಚಿಯನ್ನು ಯಾವ ವಸ್ತುವೂ ಕೊಡಲು ಸಾಧ್ಯವಿಲ್ಲ. ಅದೇರೀತಿ ತಾಯಿಯ ಸ್ಥಾನವನ್ನು ಯಾರೂ ತುಂಬಲಿಕ್ಕೆ ಸಾಧ್ಯವಿಲ್ಲ. ಅಂತಃಕರಣ, ವಾತ್ಸಲ್ಯ, ಪ್ರೀತಿ, ದಯೆ ತಾಯಿಯಲ್ಲಿರುವ ವಿಶೇಷ ಗುಣಗಳು. ಪ್ರಾಚೀನ ಕಾಲದಿಂದಲೂ ತಂದೆ ತಾಯಿಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದು’ ಎಂದು ಹೇಳಿದರು.

‘ಮಕ್ಕಳು ಕೂಡ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳದೇ ಪಾಲಕರನ್ನು ಪೋಷಣೆ ಸಂರಕ್ಷಣೆ ಮಾಡಬೇಕು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿಯೇ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದೆ. ಸಮಾಜದಲ್ಲಿ ಹೆಣ್ಣುಮಕ್ಕಳು ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಸೌಲಭ್ಯಗಳ ಉಪಯೋಗ ‍ಪ‍ಡೆದುಕೊಳ್ಳಬೇಕು’ ಎಂದು ತಿಳಿಸಿದರು. 

ಸೌಖ್ಯದಾ ಆಸ್ಪತ್ರೆಯ ಡಾ. ತೇಜಸ್ವಿನಿ ಹಿರೇಮಠ ‘ಅವ್ವನ ಮಮತೆ’ ವಿಷಯ ಕುರಿತು ಉಪನ್ಯಾಸ ನೀಡಿ, ‘ತ್ಯಾಯಿಯ ತ್ಯಾಗ ದೊಡ್ಡದು. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಹೆಣ್ಣಿಗೆ ಮುಟ್ಟಿನ ಸಮಸ್ಯೆ, ರಕ್ತನಹೀನತೆ, ಮಾನಸಿಕ ದೌರ್ಬಲ್ಯಗಳು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿರುತ್ತವೆ. ಈ ಸಮಯದಲ್ಲಿ ಪರಿವಾರದವರ ಸಹಾಯ, ಸಹಕಾರ, ಕಾಳಜಿ ಬಹಳ ಅವಶ್ಯ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸಮಾಜದಲ್ಲಿ ಹೆಣ್ಣು ಅಂದರೆ ನಿರ್ಲಕ್ಷ್ಯಭಾವ ಇದೆ. ಆ ಭಾವ ತೊರೆದು ಪ್ರತಿಹಂತದಲ್ಲೂ ಸ್ಪಂದನೆ, ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರು ಲಿಂಗೈಕ್ಯ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ನುಡಿನಮನ ಸಲ್ಲಿಸಿದರು. ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ರತ್ನವ್ವ ಚನ್ನವೀರಪ್ಪ ಕ್ಯಾಡದ, ಮಹಾದೇವಿ ಈಶ್ವರಪ್ಪ ಅರಳಿ, ಜ್ಯೋತಿ ಅಶೋಕ ಅಗಸನಕೊಪ್ಪ, ಅವರನ್ನು ಶ್ರೀಗಳು ಸನ್ಮಾನಿಸಿದರು.

ಗುರುನಾಥ ಸುತಾರ, ಅಶೋಕ ಸುತಾರ, ಕುಮಾರಸ್ವಾಮಿ ಹಿರೇಮಠ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಅರಮಾನ ಎಂ. ನಾಗನೂರ, ವಚನ ಚಿಂತನೆಯನ್ನು ಸಾಕೀಬ್ ಎನ್. ನಾಗನೂರ ನಡೆಸಿಕೊಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರ್‌ಮನ್‍ ವಿವೇಕಾನಂದಗೌಡ ಪಾಟೀಲ, ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT