ಗದಗ: ‘ಸ್ವಚ್ಛತೆಯ ಮಹತ್ವ ಅರಿಯಬೇಕಾದರೆ ಮಹಾತ್ಮ ಗಾಂಧೀಜಿ ಅವರ ಜೀವನ ಅನುಸರಿಸಬೇಕು. ಗ್ರಾಮದ ಸ್ವಚ್ಛತೆ ಸಾಧಿಸಬೇಕಾದರೆ ಪ್ರತಿಯೊಬ್ಬ ನಾಗರಿಕನೂ ಸರ್ಕಾರದ ಜೊತೆಗೆ ಕೈಜೋಡಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ.ಕಲ್ಲೇಶ ಹೇಳಿದರು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಗದಗ ತಾಲ್ಲೂಕಿನ ಕುರ್ತಕೋಟಿ ಹಾಗೂ ಹೊಂಬಳ ಗ್ರಾಮ ಪಂಚಾಯ್ತಿಗಳಲ್ಲಿ ಇತ್ತೀಚೆಗೆ ನಡೆದ ‘ಸ್ವಚ್ಛೋತ್ಸವ- ನಿತ್ಯೋತ್ಸವ ಮಾಸಾಚರಣೆ 2020-21’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಸಮಾಲೋಚಕರಾದ ಕೃಷ್ಣಾ ದೊಡ್ಡಮನಿ ಹಾಗೂ ಎಚ್.ಎಫ್.ಕುಸಣ್ಣವರ ಸ್ವಚ್ಛ ಭಾರತ ಯೋಜನೆ ಉದ್ದೇಶ ಹಾಗೂ ರೂಪುರೇಷೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿನ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಸಹಾಯ ಸಂಘದ ಮಹಿಳೆಯರು, ಆಶಾ, ಅಂಗನವಾಡಿ, ಪಂಚಾಯ್ತಿ ಸಿಬ್ಬಂದಿಯೊಂದಿಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ನಂತರ ಶ್ರಮದಾನ ನಡೆಯಿತು.