ನರೇಗಲ್: ಇಲ್ಲಿನ ತೋಟಗಂಟಿ ಗ್ರಾಮದ ವಿಜಯಲಕ್ಷ್ಮೀ ಹೊನ್ನಪ್ಪಗೌಡ್ರ ಕೆನಡಾದಿಂದ ಬಂದು ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಒಂಟಾರಿಯೊ ನಗರದಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿರುವ ವಿಜಯಲಕ್ಷ್ಮೀ ಸಂವಿಧಾನದತ್ತ ಹಕ್ಕು ಚಲಾಯಿಸುವುದಕ್ಕಾಗಿ, ಕಂಪನಿಯಿಂದ ರಜೆ ಪಡೆದುಕೊಂಡು, ₹1 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿಕೊಂಡು ಮಂಗಳವಾರ ಹಳ್ಳಿಗೆ ಬಂದು ಮತ ಚಲಾಯಿಸಿದರು.
’ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಎಂಟು ಸ್ನೇಹಿತರು ಸಹ, ತಾಯ್ನಾಡಿಗೆ ಬಂದು ಮತ ಚಲಾಯಿಸಿದ್ದಾರೆ. ನಾವು ಎಲ್ಲೇ ಇದ್ದರೂ, ದೇಶದ ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯ. ಹಾಗಾಗಿ, ಕೆಲಸಕ್ಕೆ ರಜೆ ಹಾಕಿ ಬಂದೆ‘ ಎಂದು ವಿಜಯಲಕ್ಷ್ಮೀ ‘ಪ್ರಜಾವಾಣಿ’ಗೆ ತಿಳಿಸಿದರು.
’ಆಧುನಿಕತೆಯತ್ತ ಮುಖ ಮಾಡಿರುವ ನಮ್ಮ ದೇಶದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿದೆ. ರಾಷ್ಟ್ರದ ಪ್ರಗತಿಯನ್ನು ನಿರ್ಧರಿಸುವ ಶಕ್ತಿ ನಮ್ಮ ಕೈಯಲ್ಲಿದೆ. ಮತದಾನದಲ್ಲಿ ಏರುಪೇರಾದರೆ ಉತ್ತಮ ಜನಪ್ರತಿನಿಧಿಯ ಆಯ್ಕೆಯಲ್ಲಿಯೂ ಏರುಪೇರಾಗುವ ಸಾಧ್ಯತೆ ಇದೆ. ಪ್ರಜ್ಞಾವಂತರಾದ ನಾವು ಮೊದಲು ನಮ್ಮ ಕರ್ತವ್ಯವನ್ನು ನಿರ್ವಹಿಸಿ, ಉತ್ತಮರನ್ನು ಆಯ್ಕೆ ಮಾಡಬೇಕು‘ ಎಂದು ಹೇಳಿದರು.