ಡಂಬಳ: ಈಚೆಗೆ ಸುರಿದ ಧಾರಾಕಾರ ಮಳೆಯಿಂದ, ಜಮೀನಿನಲ್ಲಿ ನೀರು ನಿಂತು ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ರೈತರ ಹತ್ತಿ ಬೆಳೆ ಹಾನಿಗೀಡಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಈಗ ಅತಿವೃಷ್ಟಿಯ ಸಂಕಷ್ಟ ಎದುರಿಸುವಂತಾಗಿದೆ.
‘3 ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದೆ. ಬೀಜ, ಗೊಬ್ಬರ, ಆಳಿನ ಕೂಲಿ ಸೇರಿ ಎಕರೆಗೆ ₹ 15 ಸಾವಿರ ಖರ್ಚಾಗಿದೆ. ಒಟ್ಟು 30ರಿಂದ 35 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇತ್ತು. ಒಂದು ಗಿಡದಲ್ಲಿ 60ರಿಂದ 70 ಕಾಯಿ ಬಿಟ್ಟಿತ್ತು’ ಆದರೆ, ಈಗ ಎಲ್ಲವೂ ನೀರು ಪಾಲಾಗಿದೆ’ ಎಂದು ಡಂಬಳದ ರೈತ ಬಸವರಾಜ ಕುಸಗಲ್ಲ ಅಳಲು ತೋಡಿಕೊಂಡರು.
ಹೋಬಳಿ ವ್ಯಾಪ್ತಿಯಲ್ಲಿ ಡೋಣಿ, ಡೋಣಿತಾಂಡ, ಹಿರೇವಡ್ಡಟ್ಟಿ, ಹಾರೂಗೇರಿ, ಚಿಕ್ಕವಡ್ಡಟ್ಟಿ, ಕೆಲೂರ, ಶಿಂಗಟಾರಾಯನಕೇರಿ ಕದಾಂಪೂರ ಮೇವುಂಡಿ ಗ್ರಾಮಗಳಲ್ಲಿ ನೂರಾರು ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಆದರೆ, ಹಿಂಗಾರಿನಲ್ಲಿ ಅಬ್ಬರಿಸಿದ ಮಳೆ ರೈತರ ಗಾಯದ ಮೇಲೆ ಬರೆ ಎಳೆದಿದೆ.
‘ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸಬೇಕು’ ಎಂದು ರೈತರಾದ ಗೋಣಿಬಸಪ್ಪ ಕೊರ್ಲಹಳ್ಳಿ, ಅಂದಪ್ಪ ಹಾರೂಗೇರಿ ಆಗ್ರಹಿಸಿದ್ದಾರೆ.