ಗಜೇಂದ್ರಗಡ: ‘ಪಟ್ಟಣದಲ್ಲಿ ಈಚೆಗೆ ಆರಂಭಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ’ ಎಂದು ಆರೋಪಿಸಿ ಕರವೇ ಮುಖಂಡರು ಬುಧವಾರ ತಹಶೀಲ್ದಾರ್ಗೆ ದೂರು ಸಲ್ಲಿಸಿದರು.
‘ಈ ವಿಷಯ ತಿಳಿದಿದ್ದರೂ ಸಂಬಂಧಿಸಿದವರು ಯಾವುದೇ ಕ್ರಮ ವಹಿಸದೇ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಕಾಮಗಾರಿ ಕುರಿತು ಸಮಗ್ರ ಮಾಹಿತಿಯುಳ್ಳ ಫಲಕ ಹಾಕಬೇಕೆಂಬ ನಿಯಮವಿದ್ದರೂ, ಅದನ್ನು ಯಾರೂ ಪಾಲಿಸುತ್ತಿಲ್ಲ. ಪಟ್ಟಣದಲ್ಲಿ ನಿರ್ಮಿಸಿರುವ ಯಾವ ರಸ್ತೆಯೂ ಸುಸ್ಥಿತಿಯಲ್ಲಿ ಇಲ್ಲ. ಪಟ್ಟಣದ 22ನೇ ವಾರ್ಡಿನಲ್ಲಿ ನಡೆದ ರಸ್ತೆಕಾಮಗಾರಿಯಂತೂ ತೀರ ಕಳಪೆ ಆಗಿದೆ. ಈ ಕುರಿತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಇಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಿ ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಯಲ್ಲಿರಿಸಬೇಕು. ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಮುಖ್ಯಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಕಾರ್ಯಕರ್ತರು ಆಗ್ರಹಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಪೂಜಾರ, ಅಲ್ಲಾಭಕ್ಷ ಮುಚ್ಚಾಲೆ,ರಫೀಕ್ ಯಲಬುಣಸಿ, ಬಾಬು ಗೋಡೆಕಾರ, ಮಂಜುನಾಥ ಹೂಗಾರ, ದಾವಲಸಾಬ್ ಗಣಿ, ವಿಶ್ವನಾಥ ಮಾಳೋತ್ತರ, ಆನಂದ ಮಾದರ ಇದ್ದರು.