ಗಜೇಂದ್ರಗಡ: ತಾಲ್ಲೂಕಿನ ಹಲವೆಡೆ ಈಚೆಗೆ ತೋಳಗಳ ಕಾಟ ಹೆಚ್ಚಿದ್ದು, ಕುರಿಹಿಂಡನ್ನು ತೋಳಗಳ ದಾಳಿಯಿಂದ ರಕ್ಷಿಸುವುದು ಕುರಿಗಾರರಿಗೆ ಸವಾಲಿನ ಕೆಲಸವಾಗಿದೆ.
‘ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದು, ತೋಳಗಳು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರಲು ಆರಂಭಿಸಿವೆ. ರಾತ್ರಿ ವೇಳೆ ಊರ ಹೊರವಲಯದ ಜಮೀನುಗಳಲ್ಲಿ ಬೀಡು ಬಿಟ್ಟಿರುವ ಕುರಿಹಿಂಡಿನ ಮೇಲೆ ದಾಳಿ ನಡೆಸುವ ತೋಳಗಳು ಕುರಿಗಳನ್ನು ಸಾಯಿಸುತ್ತಿವೆ. ಒಮ್ಮೆ ತೋಳಗಳ ಹಿಂಡು ಕುರಿಮಂದೆ ಮೇಲೆ ದಾಳಿ ನಡೆಸಿದರೆ ಕನಿಷ್ಠ 30ರಿಂದ 40 ಕುರಿಗಳನ್ನು ಸಾಯಿಸುತ್ತವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ’ ಎನ್ನುತ್ತಾರೆ ಕುರಿಗಾರರು.
‘ಹಗಲಿನಲ್ಲಿ ಗುಡ್ಡದ ಸಣ್ಣ ಗುಹೆ, ಪೊದೆಗಳಲ್ಲಿ ವಾಸಿಸುವ ತೋಳಗಳು ರಾತ್ರಿ ಆಗುತ್ತಿದ್ದಂತೆ ಬೇಟೆಗೆಂದು ಹೊರ ಬೀಳುತ್ತವೆ. ಈಚೆಗೆ ಗಜೇಂದ್ರಗಡ ಸಮೀಪದ ಪ್ಯಾಟಿ ಮತ್ತು ಗೋಗೇರಿ ಗ್ರಾಮಗಳ ಸಮೀಪದಲ್ಲಿ ತೊಳಗಳು ದಾಳಿ ನಡೆಸಿ ನೂರಾರು ಕುರಿಗಳನ್ನು ಸಾಯಿಸಿವೆ. ಹಗಲಿನಲ್ಲಿ ಕುರಿ ಮೇಯಿಸಿ ಕೊಂಡು ಬಹುದೂರ ಹೋಗುತ್ತೇವೆ. ರಾತ್ರಿ ವೇಳೆ ನೀರು ಇರುವ ಸ್ಥಳದಲ್ಲಿ ಠಿಕಾಣಿ ಹೂಡುತ್ತೇವೆ. ಆದರೆ, ಈಚೆಗೆ ತೋಳಗಳ ಕಾಟ ಹೆಚ್ಚಿರುವುದರಿಂದ ರಾತ್ರಿ ಸಣ್ಣ ಶಬ್ದ ಕೇಳಿಸಿದರೂ ಕುರಿಗಳು ಬೆದರುತ್ತವೆ.
ತೋಳಗಳು ಹಟ್ಟಿಗೆ ನುಗ್ಗಿ ದಾಗ ಒಳಗಿರುವ ಕುರಿಗಳು ಗಾಬರಿ ಯಿಂದ ದಿಕ್ಕಾಪಾಲಾಗಿ ಓಡುತ್ತವೆ. ಆಗ ಸುತ್ತಲೂ ನಿಲ್ಲಿಸಿದ ಬಿದರಿನ ಹಟ್ಟಿ ಕೆಳಗೆ ಬೀಳುತ್ತಿದ್ದಂತೆ ತೋಳಗಳು ಒಳ ನುಗ್ಗಿ ಬಾಯಿಗೆ ಸಿಕ್ಕಷ್ಟು ಕುರಿಗಳನ್ನು ಕಚ್ಚಿ ಸಾಯಿಸುತ್ತವೆ. ಕೆಲವನ್ನು ಎಳೆದೊಯ್ಯು ತ್ತವೆ. ಒಂದೆರಡು ನಿಮಿಷದಲ್ಲಿ ಹತ್ತಾರು ಕುರಿಗಳು ಸತ್ತು ಹೋಗಿರುತ್ತವೆ’ ಎನ್ನುತ್ತಾರೆ ಗೂಳಪ್ಪ ಹಾದಿಮನಿ.
‘ಮೊದಲು ಒಂದೆರಡು ತೋಳಗಳು ಕುರಿಮಂದೆಯತ್ತ ಬರುತ್ತವೆ. ಅವುಗ ಳನ್ನು ನಾಯಿಗಳು ಬೆನ್ನಟ್ಟಿಕೊಂಡು ಹೋಗುತ್ತಿದ್ದಂತೆ, ಇನ್ನೊಂದು ಬದಿ ಯಿಂದ ಉಳಿದ ತೋಳಗಳು ಹಟ್ಟಿಗೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸುತ್ತವೆ. ಕುರಿಗಾರರು ತೋಳಗಳನ್ನು ಕೊಲ್ಲು ವಂತಿಲ್ಲ. ಇದು ಕುರಿಗಾರರ ಕಟ್ಟಳೆ. ಹೀಗಾಗಿ, ತೋಳ ಬಂದು ತನ್ನ ಪಾಲನ್ನು ತೆಗೆದುಕೊಂಡು ಹೋಗುತ್ತದೆ ಎನ್ನು ತ್ತಾರೆ’ ಎನ್ನುತ್ತಾರೆ ಕುರಿಗಾರ ಲಾಲಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.