ಗದಗ: ಡಿ.25ರಂದು ಬೆಂಗಳೂರಿನಲ್ಲಿ ಭಾರತ- ಪಾಕಿಸ್ತಾನ ಟ್ವೆಂಟಿ-20 ಕ್ರಿಕೆಟ್ ಪಂದ್ಯ ನಡೆಯು ವುದನ್ನು ವಿರೋಧಿಸಿ ಶ್ರೀರಾಮ ಸೇನಾ ಜಿಲ್ಲಾ ಘಟಕ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಟಾಂಗಾ ಕೂಟದಲ್ಲಿ ಜಮಾಯಿಸಿದ ಶ್ರೀರಾಮ ಸೇನಾ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದರು.
ಪಾಕಿಸ್ತಾನ ಭಾರತದೊಂದಿಗೆ ಯಾವಾಗಲೂ ಶತ್ರುತ್ವ ಮೈಗೊಡಿಸಿಕೊಂಡಿದೆ. ಪಾಕಿಸ್ತಾನದ ಕುಮ್ಮಕ್ಕಿನಿಂದಲೇ ದೇಶದಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ದೇವಸ್ಥಾನ, ಹೈಕೋರ್ಟ್, ಜನನಿಬಿಡ ಪ್ರದೇಶ, ಮಾರುಕಟ್ಟೆ, ಆಸ್ಪತ್ರೆ, ರೈಲ್ವೆ ನಿಲ್ದಾಣ, ಹೋಟೆಲ್ಗಳಲ್ಲಿ ಹಾಗೂ ಸಂಸತ್ ಭವನದ ಮೇಲೆ ದಾಳಿ ಮಾಡಿ ದೇಶಕ್ಕೆ ಸವಾಲು ಎಸೆದಿದ್ದಾರೆ. ಇಂತಹ ದೇಶದೊಂದಿಗೆ ಕ್ರಿಕೆಟ್ ಪಂದ್ಯ ಆಡಲು ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
2007ರಲ್ಲಿ ಪಂದ್ಯ ವೀಕ್ಷಣೆಗೆ ಬಂದ 132 ಜನ ಪಾಕಿಸ್ತಾನಿಯರು ದೇಶದಲ್ಲೆ ನೆಲೆಸಿದ್ದಾರೆ. ಸೆರೆಸಿಕ್ಕಿರುವ ಭಯೋತ್ಪಾದಕ ಹೆಡ್ಲಿ ಹೇಳಿಕೆ ಪ್ರಕಾರ 2007ರ ಪಂದ್ಯ ವೀಕ್ಷೆಣೆಗೆ ವೀಸಾ ಪಡೆದು ಬಂದ ಪಾಕಿಸ್ತಾನಿಯರೇ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.