ರೋಣ: ಬೆಳವಣಕಿ ಗ್ರಾಮಕ್ಕೆ ಪದವಿ ಕಾಲೇಜು, ಯಾವಗಲ್ಲ- ಬೆಳವಣಕಿ ಹತ್ತಿರ ಇರುವ ಕೆರೆಗೆ ನೀರು ತುಂಬಿಸು ವುದು, ಮಾಳವಾಡ ಮಾರ್ಗವಾಗಿ ಹೊಳೆಆಲೂರಿಗೆ ಬಸ್ ಸಂಪರ್ಕ ಹಾಗೂ ಸೊಲ್ಲಾಪುರ- ಯಶವಂತಪುರ ರೈಲು ಸಮೀಪದ ಮಲ್ಲಾಪುರ ನಿಲ್ದಾಣದಲ್ಲಿ 1ನಿಮಿಷದ ನಿಲುಗಡೆ ಒತ್ತಾಯಿಸಿ ಗೆಳೆಯರ ಬಳಗ ಹಾಗೂ ಸರಕಾರಿ ಪದವಿ ಕಾಲೇಜು ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ಅನಿಲ ತೆಗ್ಗಿನಕೇರಿ, ಬೆಳವಣಕಿ ಗ್ರಾಮವು ಶೈಕ್ಷಣಿಕ ಗ್ರಾಮವಾಗಿದೆ. ಇಲ್ಲಿನ ಸುತ್ತು ಮುತ್ತಲಿನ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪದವಿ ಕಾಲೇಜು ಅತಿ ಅವಶ್ಯವಾಗಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಲಿಖಿತವಾಗಿ ಹಾಗೂ ಮೌಖಿಕವಾಗಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೇಳಿದರೂ ಕೂಡ ಯಾವುದೇ ಕೆಲಸವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಾಪುರ, ಕೌಜಗೇರಿ, ಮಾಳ ವಾಡ, ಯಾವಗಲ್ಲ, ಸಂದಿಗವಾಡ, ಅರ ಹುಣಸಿ ಮುಂತಾದ ಗ್ರಾಮಗಳ ಜನರಳ ಅನುಕೂಲಕ್ಕಾಗಿ ಬೆಳವಣಕಿಯಲ್ಲಿ ಒಂದು ನೆಮ್ಮದಿ ಕೇಂದ್ರ ಸ್ಥಾಪಿಸಬೇಕು. ಇದರಿಂದ ಅಂಗವಿಕಲರಿಗೆ ಹಾಗೂ ಸಂಧ್ಯಾ ಸುರಕ್ಷ ಯೋಜನೆಯಡಿಯಲ್ಲಿ ಬರುವ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಿಂಗಬಸಪ್ಪ ಹದ್ಲಿ, ಶಿವಪ್ಪ ಹಾಲಭಾವಿ, ಉಮಾ ಹುನಗುಂದ, ಸರೋಜಾ ಶೆಗಣಿ, ನವೀನ ಹಾಳಕೇರಿ ಹಾಜರಿದ್ದರು.