ಗದಗ: ಕಸದ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಆರಂಭಿಸಿದ ‘ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ’ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಗದಗ–ಬಳಗಾನೂರ ರಸ್ತೆಯಲ್ಲಿ ಇರುವ 25 ಎಕರೆ 4 ಗುಂಟೆ ಪ್ರದೇಶದಲ್ಲಿ ₹2.17 ಕೋಟಿ ವೆಚ್ಚದಲ್ಲಿ ಕಸ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಬಡಾವಣೆಗಳು ಹಾಗೂ ಇತರೆಡೆ ಪ್ರತಿದಿನ ಸಂಗ್ರಹಿಸುವ ಅಂದಾಜು 75 ಟನ್ ಕಸವನ್ನು ಇಲ್ಲಿಯೇ ಸುರಿಯಲಾಗುತ್ತಿದೆ. ಈಗಾಗಲೇ ಘಟಕವು ಕಸದಿಂದ ಭರ್ತಿಯಾಗಿದೆ. ಕಸ ಬೇರ್ಪಡಿಸಿ ಕೇವಲ 10 ಲಾರಿಗಳಷ್ಟು ಗೊಬ್ಬರ ತಯಾರಿಸಲಾಗಿದೆ. ಈ ಘಟಕದಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಹೆಮ್ಮರವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಕಸ ಸುರಿಯಲು ಸ್ಥಳ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಯೋಜನೆ ಪೂರ್ಣ ಗೊಂಡು ಗದಗ ನಗರಸಭೆಗೆ ಆದಾಯವೂ ಬರಬೇಕಿತ್ತು. ಆದರೆ, ಈವರೆಗೂ ಕಸ ಸಂಸ್ಕರಣಾ ಘಟಕ ಸರಿಯಾಗಿ ಕೆಲಸ ಮಾಡದ ಕಾರಣ, ಯೋಜನೆಗೆ ಮತ್ತಷ್ಟು ಹಿನ್ನಡೆ ಆದಂತಾಗಿದೆ.